ಹಾವೇರಿ: ಮತಾಂತರ ನಿಷೇಧ ಕಾಯ್ದೆ ಬೇಡ ಎನ್ನುವವವರು ಏಕೆ ಬೇಡ ಎನ್ನುವುದನ್ನು ಮೊದಲು ಸ್ಪಷ್ಟಪಡಿಸಲಿ. ಯಾವುದೇ ಮತ, ಧರ್ಮಿಯರು ಅವರವರ ಮತ ಮತ್ತು ಧರ್ಮದಲ್ಲಿ ನೆಮ್ಮದಿಯಿಂದ ಬದುಕಲಿ ಎಂದು ಧಾರ್ಮಿಕ ಮತ್ತು ಹಕ್ಕು ರಕ್ಷಣಾ ಕಾಯ್ದೆ ಹೇಳುತ್ತದೆ ಅದರ ಆಧಾರದಲ್ಲಿ ಈ ಬಿಲ್ ತರಲಾಗಿದೆ ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.
ಮಂಗಳವಾರ ಜಿ.ಪಂ ಸಭಾಂಗಣದಲ್ಲಿ ಜರುಗಿದ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯಾರೇ ಆಗಲಿ ಅವರ ಮತವನ್ನು ಬಿಟ್ಟು ಬೇರೆ ಧರ್ಮಕ್ಕೆ ಹೋಗಬೇಕೆನ್ನುವವರು ಜಿಲ್ಲಾಧಿಕಾರಿಗಳಿಗೆ ಅರ್ಜಿಯನ್ನು ನೀಡಲು ಅವಕಾಶವಿದ್ದೇಯಿದೆ. ಬಡವರನ್ನು ಮೋಸ, ವಂಚನೆ, ಹಣಕಾಸಿನ ಆಮೀಷಧ ಮೂಲಕ ಮತಾಂತರ ತಡೆಗೆ ಇದು ಪ್ರಯೋಜನವಾಗಲಿದೆ ಎಂದು ತಿಳಿಸಿದರು.
ಈ ಕಾಯ್ದೆ ವಂಚನೆ ಮತಾಂತರವನ್ನು ತಡೆಗಟ್ಟುತ್ತೆ. ಈ ಕುರಿತು ವಿರೋಧಿಸುವ ಕೆಲವರನ್ನು ಹೊರತುಪಡಿಸಿ ಮುಸ್ಲೀಂ, ಕ್ರಿಶ್ಚಿಯನ್, ಬೌದ್ಧ, ಪಾರ್ಸಿ, ಹಿಂದು ಹಾಗೂ ಜೈನ ಧರ್ಮಿಯರೆಲ್ಲರೂ ಮುಕ್ತ ಕಂಠದಿಂದ ಒಪ್ಪುತ್ತಾರೆಂಬ ವಿಶ್ವಾನ ನನ್ನಲ್ಲಿದೆ ಎಂದರು.
ಘರ್ ವಾಪಸಾತಿಯಾದವರಿಗೆ ಸ್ಥಾನಮಾನವೇನು ಎನ್ನುವುದು ಇಲ್ಲಿ ಅಪ್ರಸ್ತುತ. ಮತಾಂತರವಾದವರು ತಮ್ಮ ಮೂಲ ಧರ್ಮಕ್ಕೆ ಬಂದರೆ ಅದೇ ಧರ್ಮದ ರೀತಿ ನಿತಿಗಳನ್ನು ಅವರು ಮತ್ತೆ ಪಾಲನೆ ಮಾಡುತ್ತಾರೆ. ಇಲ್ಲಿ ಬೇರೆ ರೀತಿಯದು ಏನೂ ಇರುವುದಿಲ್ಲ ಇದಕ್ಕೆ ಬೇರೆ ಅರ್ಥವನ್ನು ಕಲ್ಪಿಸುವುದು ಅವಶ್ಯಕತೆಯಿಲ್ಲ ಎಂದು ತಿಳಿಸಿದರು. ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿ ವಿಷಯಗಳ ಕುರಿತು ಚರ್ಚಿಸಲಾಗಿದೆ.
ಮೇಲ್ಮನೆಯಲ್ಲಿ ಎಸ್.ಆರ್.ಪಾಟೀಲ ಹಾಗೂ ಕೆಳಮನೆಯಲ್ಲಿ ಸಿದ್ಧರಾಮಯ್ಯ ಚರ್ಚೆ ಮಾಡಿದ್ದಾರೆ. ಈ ಸಮಯವನ್ನು ಉತ್ತರ ಕರ್ನಾಟಕದ ಅಭಿವೃದ್ಧಿ ವಿಷಯ ಚರ್ಚೆಗೆ ವಿರೋಧ ಪಕ್ಷದವರು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಆಡಳಿತ ಪಕ್ಷದ ಉತ್ತರ ಕರ್ನಾಟಕ ಅಭಿವೃದ್ಧಿ ವಿಷಯದಲ್ಲಿ ಬೆಳಗಾವಿ ಅಧಿವೇಶನದಲ್ಲಿ ಉತ್ತಮ ಆಡಳಿತವನ್ನು ನೀಡಿದೆ ಎಂದು ಹೇಳಿದರು.