ಬೆಂಗಳೂರು: ಉಕ್ರೇನ್ ಯುದ್ಧದ ವೇಳೆ ಗುಂಡು ತಗುಲಿ ಮೃತಪಟ್ಟ ಹಾವೇರಿ ಜಿಲ್ಲೆಯ ವಿದ್ಯಾರ್ಥಿ ನವೀನ್ ಗ್ಯಾನಗೌಡರ್ ಮೃತದೇಹ ತಾಯ್ನಾಡಿಗೆ ಆಗಮನ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೂರವಾಣಿ ಕರೆ ಮಾಡಿ, ಕೃತಜ್ಞತೆ ಸಲ್ಲಿಸಿದ್ದಾರೆ.
ಚಳಗೆರೆಯಿಂದ ಬೆಂಗಳೂರಿಗೆ ವಾಪಸಾದ ಬಳಿಕ ದೂರವಾಣಿ ಕರೆ ಮಾಡಿದ ಸಿಎಂ, ಮೂರು ನಿಮಿಷಗಳ ಕಾಲ ಮಾತುಕತೆ ನಡೆಸಿದರು.
ನವೀನ್ ಮೃತದೇಹವನ್ನು ದೇಶಕ್ಕೆ ತರಿಸುವಲ್ಲಿ ತಮ್ಮ ಪಾತ್ರ ಬಹಳ ಮುಖ್ಯವಾಗಿದೆ. ಕೊನೆಯ ಬಾರಿಗೆ ನವೀನ್ ಮುಖ ನೋಡಬೇಕೆಂಬುದು ಅವರ ತಂದೆ ತಾಯಿ ಆಸೆಯಾಗಿತ್ತು. ಹೆತ್ತವರ ಈ ಆಸೆಯನ್ನು ತಾವು ಈಡೇರಿಸಿದ್ದೀರಿ. ಕರ್ನಾಟಕದ ರಾಜ್ಯದ ಪರವಾಗಿ ತಮಗೆ ನಾನು ಧನ್ಯವಾದ ಅರ್ಪಿಸುತ್ತೇನೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಇದು ನಿಜಕ್ಕೂ ಅಸಾಧಾರಣ ಕೆಲಸ. ಯುದ್ಧ ಭೂಮಿಯಿಂದ ಮೃತದೇಹ ತರುವುದು ಸುಲಭದ ಮಾತಲ್ಲ. ಆದರೆ ತಮ್ಮ ರಾಜತಾಂತ್ರಿಕತೆಯಿಂದ ಅಸಾಧಾರಣ ಕೆಲಸವನ್ನು ಮಾಡಿ ತೋರಿಸಿದ್ದೀರಿ. ಇದಕ್ಕಾಗಿ ನಾನು ಧನ್ಯವಾದ ತಿಳಿಸ ಬಯಸುತ್ತೇನೆಂದು ಮುಖ್ಯಮಂತ್ರಿಗಳು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡಿದರು.