ಗದಗ: ಬರಗಾಲದ ಕಾರಣ ಈಗ ಮೆಣಸಿನಕಾಯಿಗೆ ದರ ಏರಿಕೆಯಾಗಿದೆ. ಈ ವೇಳೆ ಮೆಣಸಿನ ಕಾಯಿ ಕಳ್ಳತನ ಪ್ರಕರಣಗಳು ಹೆಚ್ಚಿವೆ. ಅದಕ್ಕಾಗಿ ರೈತರು ಮೆಣಸಿನಕಾಯಿ ಕಾವಲಿಗೆ ಮುಂದಾಗಿದ್ದಾರೆ.
ಆದರೆ ಜಮೀನಿನಲ್ಲಿ ಮೆಣಸಿನಕಾಯಿ ಬೆಳೆ ಕಾಯುತ್ತಿದ್ದ ರೈತ ಕಾರ್ಮಿಕನ ತಲೆಯನ್ನು ದುಷ್ಕರ್ಮಿಗಳು ಕತ್ತರಿಸಿಕೊಂಡು ಹೋದ ಘಟನೆ ಗದಗ ತಾಲೂಕಿನ ತಿಮ್ಮಾಪೂರ ಗ್ರಾಮದ ಜಮೀನಿನಲ್ಲಿ ನಡೆದಿದೆ.
ಸಣ್ಣ ಹನುಮಪ್ಪ ಅಲಿಯಾಸ್ ಕುಂಟೆಪ್ಪ ವಜ್ರದ್ (65) ಎಂಬ ರೈತ ಕಾರ್ಮಿಕನ ರುಂಡವನ್ನು ಯಾರೋ ಕತ್ತರಿಸಿಕೊಂಡು ಹೋಗಿದ್ದಾರೆ. ಸ್ಥಳದಲ್ಲಿ ದೇಹ ಮಾತ್ರ ಇದ್ದು, ರುಂಡ ಇಲ್ಲ. ಮೃತ ರೈತ ಕಾರ್ಮಿಕ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಮಾಳೆಕೊಪ್ಪ ನಿವಾಸಿ. ಈತ ತಿಮ್ಮಾಪೂರ ಗ್ರಾಮದ ಬಾಲಪ್ಪ ಕೊಪ್ಪದ ಎಂಬ ರೈತರ ಜಮೀನಲ್ಲಿ ಬೆಳೆ ಕಾಯುತ್ತಿದ್ದ. ಜಮೀನಿನ ಮಾಲಿಕರು ನಿತ್ಯ ಊಟ ಕೊಟ್ಟು ತಿಂಗಳಿಗೆ 7,000 ರೂ. ಕೊಡುವುದಾಗಿ ಹೇಳಿ ಜಮೀನು ಕಾಯುವಂತೆ ಹೇಳಿದ್ದರು. ಕಳೆದ ಒಂದು ತಿಂಗಳಿನಿಂದ ಮೆಣಸಿನಕಾಯಿ ಕಾಯುತ್ತಿದ್ದ. ಆದರೆ ಬೆಳಗ್ಗೆ ಮಾಲೀಕರು ಬಂದು ನೋಡಿದಾಗ ಕುಂಟೆಪ್ಪನ ರುಂಡ ಇಲ್ಲವಾಗಿದೆ.