ಗದಗ: ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾನಿಲಯ ಗದಗ, ಯೂಥ್ ಫಾರ್ ಸೇವಾ ಬೆಂಗಳೂರು, ಚಾಣಕ್ಯ ವಿಶ್ವವಿದ್ಯಾನಿಲಯ ಬೆಂಗಳೂರು, ಅಬ್ದುಲ್ ನಜೀರ್ ಸಾಬ್ ಅಧ್ಯಯನ ಕೇಂದ್ರ ಕುವೆಂಪು ವಿಶ್ವವಿದ್ಯಾನಿಲಯ ಶಿವಮೊಗ್ಗ, ಪ್ರಜ್ಞ ಪ್ರವಾಹ ಕರ್ನಾಟಕ ಇವುಗಳ ಸಂಯುಕ್ತ ಆಶ್ರಯದಲ್ಲಿ ಗದಗದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಕೌಶಲ್ಯ ವಿಕಾಸ ಭವನದಲ್ಲಿ ಬುಧವಾರ ಸ್ವ ಗ್ರಾಮ ಫೆಲೋಶಿಪ್ ಲೋಕಾರ್ಪಣೆಗೊಂಡಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪದ್ಮಶ್ರೀಪುರಸ್ಕೃತ, ವಿ ಆರ್ ಎಲ್ ಸಮೂಹದ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ವಿಜಯ ಸಂಕೇಶ್ವರ, ಕಾರ್ಯಕ್ರಮದ ಅಧ್ಯಕ್ಷತೆಯನ್ನ ಗದಗ ಕ. ರ. ಗ್ರ ಪಂ. ರಾ ವಿಶ್ವವಿದ್ಯಾನಿಲಯದ ಮಾನ್ಯ ಕುಲಪತಿಗಳಾದ ಪ್ರೊಫೆಸರ್ ವಿಷ್ಣುಕಾಂತ ಎಸ್ ಚಟಪಲ್ಲಿ ವಹಿಸಿದ್ದರು.
ಕಾರ್ಯಕ್ರಮದಲ್ಲಿ ದಕ್ಷಿಣ ಮಧ್ಯ ಕ್ಷೇತ್ರ ಪ್ರಜ್ಞ ಪ್ರವಾಹದ ಸಂಯೋಜಕರಾದ ರಘುನಂದನ, ಬೆಂಗಳೂರು ಯೂಥ್ ಫಾರ್ ಸೇವಾದ ಸ್ಥಾಪಕರು ಮತ್ತು ಮುಖ್ಯಮಾರ್ಗದರ್ಶಕರಾದ ವೆಂಕಟೇಶ ಮೂರ್ತಿ , ಶಿವಮೊಗ್ಗ ಕುವೆಂಪು ವಿಶ್ವವಿದ್ಯಾನಿಲಯ ಅಬ್ದುಲ್ ನಜೀರ್ ಸಾಬ್ ಪೀಠದ ನಿರ್ದೇಶಕರಾದ ಷಣ್ಮುಖ ಎ, ಬೆಂಗಳೂರು ಚಾಣಕ್ಯ ವಿಶ್ವವಿದ್ಯಾನಿಲಯದ ಭಾರತೀಯ ಅಧ್ಯಯನ ಘಟಕದ ಸಹಪ್ರಾಧ್ಯಾಪಕರು ಮತ್ತು ನಿರ್ದೇಶಕರಾದ ಪ್ರೊ. ಎಂ ಎಸ್ ಚೈತ್ರ ಉಪಸ್ಥಿತರಿದ್ದರು.
ಸ್ವಾತಂತ್ರದ ಅಮೃತ ಮಹೋತ್ಸವದ ಸಂದರ್ಭದಲ್ಲಿ, ಆತ್ಮನಿರ್ಭರ ಭಾರತದ ಕನಸನ್ನು ಕಾಣಬೇಕೆಂದರೆ, ಅದು ಸ್ವಾಲವಂಬೀ ಗ್ರಾಮದ ಕಡೆಗೆ ಹೆಜ್ಜೆ ಹಾಕುವುದೆಂದೇ ಅರ್ಥ. ಈ ನಡೆ ಹೊಸತನದ ವಿರೋಧಿಯಲ್ಲ. ಬದಲಿಗೆ ಹೊಸಚಿಗುರು ಹಳೆಬೇರು ಎನ್ನುವ ವಾಕ್ಯದಂತೆ. ಹಾಗಾಗಿ ಆತ್ಮನಿರ್ಭರ ಭಾರತವೆಂದರೇ, ಸಮಗ್ರವಿಕಾಸದ ಕಲ್ಪನೆಯಡಿ, ಗ್ರಾಮಗಳ ಸ್ವಭಾವಗಳನ್ನು ಆಧರಿಸಿ, ಗ್ರಾಮಸ್ಥರೇ ನಿರ್ಣಯಿಸಿ ಕ್ರಿಯಾನ್ವಯಗೊಳಿಸುವ ಅಭ್ಯುತ್ಥಾನ ಪಥ, ಇಂತಹ ಒಂದು ಮಾದರಿಯನ್ನು ಕಾರ್ಯರೂಪಕ್ಕೆ ತರಲು ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ನೇತೃತ್ವದಲ್ಲಿ, ಅನೇಕ ಸಮಾನಮನಸ್ಕ ಸಂಸ್ಥೆಗಳು ಮತ್ತು ಚಿಂತಕರು ಮೂರು ವರ್ಷದ ಒಂದು ಕ್ರಿಯಾಯೋಜನೆಯನ್ನು ಸಿದ್ಧಪಡಿಸಿದ್ದಾರೆ.
ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾನಿಲಯವನ್ನು (ಕೆಎಸ್ ಆರ್ ಡಿಪಿಆರ್ ಯು) ಸುಸ್ಥಿರ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ ಬೋಧನೆ, ತರಬೇತಿ ಮತ್ತು ಸಂಶೋಧನೆಗಾಗಿ ಸ್ಥಾಪಿಸಲಾಗಿದೆ. ಪ್ರಸ್ತುತ, ಸದರಿ ವಿಶ್ವವಿದ್ಯಾಲಯವು ಸ್ವ-ತತ್ವದ ಆಧಾರದ ಮೇಲೆ ಗ್ರಾಮ ವಿಕಾಸವನ್ನು ಸಾಧಿಸಲು ಹಾಗೂ ಗ್ರಾಮ ವಿಕಾಸದ ಮಾದರಿಗಳನ್ನು ರೂಪಿಸಲು ಯೂತ್ ಫಾರ್ ಸೇವಾ, ಚಾಣಕ್ಯ ವಿಶ್ವವಿದ್ಯಾಲಯ, ಪ್ರಜ್ಞಾಪ್ರವಾಹ ಮತ್ತು ಕುವೆಂಪು ವಿಶ್ವವಿದ್ಯಾಲಯದ ಅಬ್ದುಲ್ ನಜೀರ್ ಸಾಬ್, ಅಧ್ಯಯನಪೀಠದ ಸಹಯೋಗದೊಂದಿಗೆ ಸ್ವಗ್ರಾಮ ಫೆಲೋಶಿಪ್ ಅನ್ನು ಆರಂಭಿಸಿದೆ.
ಫೆಲೋಶಿಪ್ ಉದ್ದೇಶ:
ಮೂರು ವರ್ಷ ಕಾಲಾವಧಿಯ ಗುಂಪು ಮಾದರಿಯ ಫೆಲೋಶಿಪ್ ಇದಾಗಿದ್ದು ಸದರಿ ಫೆಲೊಶಿಪ್ ಮೂಲಕ ಗ್ರಾಮದ ಸ್ವಭಾವಕ್ಕೆ ಅನುಗುಣವಾಗಿ ಗ್ರಾಮ ವಿಕಾಸದ ಮಾದರಿಗಳ ನಿರ್ಮಾಣ ಮಾಡುವ, ಪರಸ್ಪರಾವಲಂಬನೆ ಮತ್ತು ಸಹಕಾರದ ಆಧಾರದ ಮೇಲೆ ಸ್ವಾವಲಂಬೀ ಗ್ರಾಮ ನಿರ್ಮಾಣ ಮಾಡುವ ಹಾಗೂ ರಾಷ್ಟ್ರಮಟ್ಟದಲ್ಲಿ ಈ ಪ್ರಯೋಗದ ಫಲಿತಗಳನ್ನು ವಿಸ್ತರಿಸಲು ಸಮಗ್ರ ಗ್ರಾಮ ವಿಕಾಸದ ಪರಿಕಲ್ಪನೆಯ ಚೌಕಟ್ಟು ಮತ್ತು ಸಾಧನಗಳನ್ನು ಅಭಿವೃದ್ಧಿಪಡಿಸುವ ಉದ್ದೇಶ ಹೊಂದಲಾಗಿದೆ.
ಫೆಲೋಶಿಪ್ನ ವಿಶೇಷಗಳು
ಸ್ವ ಆಧಾರಿತ ಗ್ರಾಮ ವಿಕಾಸದ ಮಾದರಿಯ ನಿರ್ಮಾಣಕ್ಕಾಗಿ ಗುಂಪು ಮಾದರಿಯ ಫೆಲೋಶಿಪ್ ಯೋಜಿಸಿದ್ದು ಅನೇಕರು ಜೊತೆಗೂಡಿ ಗ್ರಾಮ ವಿಕಾಸದಲ್ಲಿ ಭಾಗವಹಿಸಲು ಯೋಜನೆ ಅವಕಾಶ ನೀಡುತ್ತದೆ.ತನ್ನದೇ ಗ್ರಾಮವನ್ನು ವಿಕಾಸದತ್ತ ಕೊಂಡೊಯ್ಯಬೇಕು ಎಂಬ ಪ್ರತಿಯೊಂದೂ ತಂಡಕ್ಕೂ ಅಗತ್ಯವಾದ ಜ್ಞಾನ ಕೌಶಲ್ಯ ಹಾಗೂ ಮಾದರಿಗಳನ್ನು ತಜ್ಞರ ಹಾಗೂ ಸಂಸ್ಥೆಗಳ ಮೂಲಕ ಮೆಂಟರಿಂಗ್ ಒದಗಿಸಲಾಗುವುದು. ಗ್ರಾಮದ ಸ್ವಭಾವಕ್ಕೆ ಅನುಗುಣವಾಗಿ ಗ್ರಾಮಸ್ಥರ ಪಾಲ್ಗೊಳ್ಳುವಿಕೆಯ ಮೂಲಕ ಗ್ರಾಮದಲ್ಲಿ ಪರಿವರ್ತನೆ ಹಾಗೂ ವಿಕಾಸವನ್ನು ಅವರೇ ನಿರ್ಧರಿಸಿಕೊಳ್ಳಲು ಸಹಕಾರಿಯಾಗುವಂತೆ ಸುಗಮಗೊಳಿಸುವ ಫೆಲೋಶಿಪ್ ಇದಾಗಿದೆ.
ಫೆಲೋಶಿಪ್ ಗೆ ಅರ್ಜಿ ಸಲ್ಲಿಸಲು ಅರ್ಹರು:
ಸ್ವ ಉದ್ಯೋಗ ಮಾಡುತ್ತ ತನ್ನ ಗ್ರಾಮ ವಿಕಾಸಕ್ಕೆ ತೊಡಗಿಸಿಕೊಳ್ಳಬಯಸುವವರು. ತಮ್ಮ ಗ್ರಾಮದ ವಿಕಾಸಕ್ಕೆ ಈಗಾಗಲೇ ತೊಡಗಿಸಿಕೊಂಡಿರುವವರು.ಗ್ರಾಮದಿಂದ ಹೊರಗಿದ್ದು ವಿವಿಧ ಕ್ಷೇತ್ರಗಳಲ್ಲಿ, ವಿವಿಧ ಭಾಗಗಳಲ್ಲಿ ತೊಡಗಿಕೊಂಡಿದ್ದು ತನ್ನ ಗ್ರಾಮಕ್ಕೆ ಕೊಡುಗೆ ಕೊಡುವ ಆಸಕ್ತಿ ಇರುವವರು.
ಫೆಲೋಶಿಪ್ ಕಾಲಾವಧಿ ಮತ್ತು ವೇಳಾಪಟ್ಟಿ
ಇದು ಒಟ್ಟಾರೆ ಮೂರು ವರ್ಷದ ಪ್ರಕ್ರಿಯೆಯಾಗಿರುತ್ತದೆ. (ನವೆಂಬರ್ 2022 ರಿಂದ ನವೆಂಬರ್ 2025ರ ವರೆಗೆ) ಮೊದಲ ವರ್ಷ ಆಳವಾದ ಮತ್ತು ವಿಸ್ತಾರವಾದ ಚಟುವಟಿಕೆಗಳನ್ನು ಒಳಗೊಂಡಿರುತ್ತದೆ. ಉಳಿದ ಎರಡು ವರ್ಷಗಳು ಮೆಂಟರಿಂಗ್ ಮತ್ತು ಮಾರ್ಗದರ್ಶನ ಸ್ವರೂಪದಲ್ಲಿರುತ್ತದೆ.