ಚಾಮರಾಜನಗರ: ಸಾಲು ಮರದ ತಿಮ್ಮಪ್ಪ ಎಂದೇ ಹೆಸರಾದ ಲೆಕ್ಕ ಪರಿಷೋದಕ ವೆಂಕಟೇಶ್ ನಗರದ ಪ್ರಮುಖ ರಸ್ತೆಗಳಲ್ಲಿ ಸಾವಿರಾರು ಗಿಡಗಳನ್ನು ನೆಟ್ಟು ದಶಕಗಳಿಂದ ಲಾಲನೆ ಪೋಷಣೆ ಮಾಡುತ್ತಿರುವುದು ವಿಶೇಷವಾಗಿದೆ.
ಈ ಪೈಕಿ ಕೆಲವು ಗಿಡಗಳು ಮರಗಳಾಗಿ ಕೆಲವು ಹೂಗಳನ್ನು ಬಿಟ್ಟು ನಗರದ ಸೌಂದರ್ಯವನ್ನು ಹೆಚ್ಚಿಸುತ್ತಿವೆ. ಇನ್ನು ಕೆಲವು ಕಾಯಿ ಹಣ್ಣು ಬಿಟ್ಟು ಪಶುಪಕ್ಷಿಗಳಿಗೆ ಆಹಾರವನ್ನು ನೀಡುತ್ತಿವೆ. ಈಗಾಗಲೇ ವಾಯುವಿಹಾರಿಗಳಿಗೆ ಯಥೇಚ್ಛವಾಗಿ ಆಕ್ಸಿಜನ್ ಸಿಗುತ್ತಿವೆ. ಈ ನಡುವೆ ಕೆಲವು ಗಿಡಗಳಿಗೆ ನಂಜು ರೋಗವಿರುವುದರಿಂದ ಅವುಗಳಿಗೆ ಔಷಧಿ ಸಿಂಪಡಿಸುವ ಕಾರ್ಯಕ್ಕೆ ನಡೆಸುತ್ತಿದ್ದಾರೆ.
ಯಾವುದೇ ಫಲಾಪೇಕ್ಷೆಯಿಲ್ಲದೆ, ಗಿಡಗಳನ್ನು ನೆಟ್ಟು ಪೋಷಿಸುವ ಕಾರ್ಯದಲ್ಲಿ ತೊಡಗಿರುವ ವೆಂಕಟೇಶ್ ಅವರ ಸೇವೆಯನ್ನು ಸಾರ್ವಜನಿಕರು ಶ್ಲಾಘಿಸುತ್ತಿದ್ದಾರೆ. ಈ ಕುರಿತಂತೆ ಮಾತನಾಡಿರುವ ವೆಂಕಟೇಶ್ ಅವರು,ನಗರದಲ್ಲಿ ಕೆಲವರು ತಮ್ಮ ಹುಟ್ಟು ಹಬ್ಬಗಳಿಗಳಿಗೆ ಫ್ಲೆಕ್ಸ್ ಕಟೌಟ್ ಗಳನ್ನು ಹಾಕಿ, 2 ದಿನದ ಪ್ರಚಾರಕ್ಕಾಗಿ ಸಾವಿರಾರು ರೂಪಾಯಿ ಖರ್ಚು ಮಾಡುವುದರೊಂದಿಗೆ ನಗರದ ಅಂದವನ್ನು ಕೆಡಿಸುತ್ತಿರುತ್ತಾರೆ. ಅದರ ಬದಲಿಗೆ ಅವರದೇ ಹೆಸರಿನಲ್ಲಿ ಗಿಡ ಮರಗಳನ್ನು ನೆಟ್ಟು ಪೋಷಣೆ ಮಾಡಿದರೆ ಅದರಿಂದ ಪರಿಸರ ಸಂರಕ್ಷಣೆಯೊಂದಿಗೆ ನೆಮ್ಮದಿಯೂ ದೊರೆಯುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.