ಕಾಸರಗೋಡು: ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಪ್ರಸಾದ ಮತ್ತು ಅನ್ನದಾನಕ್ಕೆ ಬೇಕಾಗುವ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗುವ ಟ್ರ್ಯಾಕ್ಟರ್ಗಳ ಸಂಚಾರಕ್ಕೆ ಸಮಯ ಮಿತಿ ನಿಗದಿ ಮಾಡಿ ಕೇರಳ ಹೈಕೋರ್ಟ್ ಗುರುವಾರ ಆದೇಶ ಹೊರಡಿಸಿದೆ. ಸೋಮವಾರ ದಿಂದ ಗುರುವಾರದ ವರೆಗೆ ಬೆಳಗ್ಗೆ 10.30ರಿಂದ ಸಂಜೆ 4ರ ವರೆಗೆ, ರಾತ್ರಿ 10ರಿಂದ ಬೆಳಗ್ಗೆ 3ರ ವರೆಗೆ ಈ ಟ್ರ್ಯಾಕ್ಟರ್ಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ.
ಆದರೆ ಅವು ಭಕ್ತರು ನಡೆದುಕೊಂಡು ಹೋಗುವ ದಾರಿಯಲ್ಲಿ ನಿಧಾನವಾಗಿ ಸಂಚರಿಸುವಂತೆ ಮಾಡಬೇಕು.
ಈ ಬಗ್ಗೆ ಪೊಲೀಸರು ಮುತುವರ್ಜಿ ವಹಿಸ ಬೇಕು ಎಂದು ಸೂಚಿಸಿದೆ. ಜತೆಗೆ ದೈನಿಕ ಪೂಜಾವಿಧಿಗಳಿಗಾಗಿ ಪೂಜಾ ಸಾಮಗ್ರಿಗಳನ್ನು ಪ್ರತೀ ದಿನ ಬೆಳಗ್ಗೆ 5ರಿಂದ 7ರ ವರೆಗೆ ಒಯ್ಯಲು ಹೈಕೋರ್ಟ್ ಅನುಮತಿ ಕೊಟ್ಟಿದೆ.
ಈ ಹಿಂದೆ ಡಿ. 10ರಂದು ಆದೇಶ ನೀಡಿದ್ದ ಹೈಕೋರ್ಟ್, ತಿರುವಾಂಕೂರು ದೇವಸ್ವಂ ಮಂಡಳಿಯದ್ದಲ್ಲದ ಸರಕು ಸಾಗಣೆ ಟ್ರ್ಯಾಕ್ಟರ್ಗಳು ಪಂಬಾದಿಂದ ಸನ್ನಿಧಾನಕ್ಕೆ ಮಧ್ಯರಾತ್ರಿ 12ರಿಂದ ರಾತ್ರಿ 3ರ ವರೆಗೆ ಮಾತ್ರ ಸಂಚರಿಸಬೇಕು ಎಂಬ ತನ್ನ 2017 ನವೆಂಬರ್ನ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಸೂಚಿಸಿತ್ತು. ಇದನ್ನು ಸಡಿಲಿಸಬೇಕು ಎಂದು ದೇವಸ್ವಂ ಮಂಡಳಿ ಮತ್ತು ಜಾಗೃತ ಅಧಿಕಾರಿ ಅರ್ಜಿ ಸಲ್ಲಿಸಿದ್ದರು.