ಗದಗ : ಮೂವರು ಮಕ್ಕಳೊಂದಿಗೆ ನದಿಗೆ ಹಾರಿ, ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿ ತಾಯಿ ಮತ್ತು 8 ವರ್ಷದ ಹೆಣ್ಣು ಮಗಳು ಮೃತಪಟ್ಟಿದ್ದಾರೆ. ಸಾವಿಗೆ ಹೆದರಿದ ಮತ್ತಿಬ್ಬರು ಮಕ್ಕಳು ಅಮ್ಮನ ಕೈಯಿಂದ ತಪ್ಪಿಸಿಕೊಂಡು ಬಚಾವ್ ಆಗಿದ್ದಾರೆ.
ಈ ಹೃದಯವಿದ್ರಾವಕ ಘಟನೆ ಬುಧವಾರ ನಸುಕಿನ ಜಾವ ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಹೊಳೆ ಆಲೂರು ಗ್ರಾಮದಲ್ಲಿ ನಡೆದಿದೆ. ಸಂಗಮೇಶ್ ಚಲ್ಲಿಕೇರಿ ಅವರ ಪತ್ನಿ ಉಮಾದೇವಿ(45) ಮತ್ತು ಕಿರಿ ಮಗಳು(08) ಮೃತ ದುರ್ದೈವಿಗಳು.
ಸಂಗಮೇಶ ಮತ್ತು ಉಮಾದೇವಿ ದಂಪತಿಗೆ ನಾಲ್ವರು ಮಕ್ಕಳು. ಮೂರು ತಿಂಗಳ ಹಿಂದೆ ಕೋವಿಡ್ ನಿಂದ ಸಂಗಮೇಶ್ ನಿಧನರಾಗಿದ್ದರು. 8, 12, 14 ವರ್ಷದ ಮಕ್ಕಳೊಂದಿಗೆ ತಾಯಿ ಗ್ರಾಮದಲ್ಲೇ ಇದ್ದರು. ಹಿರಿಯ ಪುತ್ರಿ ಗದಗದಲ್ಲಿ ಕಾಲೇಜು ವಿದ್ಯಾಭ್ಯಾಸ ಮಾಡುತ್ತಿದ್ದಾಳೆ.
ಈ ಕುಟುಂಬ 20 ಲಕ್ಷ ಸಾಲದದ ಹೊರೆಯಲ್ಲಿ ಸಿಲುಕಿತ್ತು, ಹಾಗಾಗಿ ಉಮಾದೇವಿ ಪತಿ ತೀರಿಕೊಂಡ ಮೇಲೆ ಮತ್ತಷ್ಟು ಖಿನ್ನತೆಗೊಳಗಾಗಿದ್ದರು. ಹೀಗಾಗಿ ಇಂದು ನಸುಕಿನ ಜಾವ ಮನೆಯ ಹತ್ತಿರ ಮೂವರು ಮಕ್ಕಳೊಂದಿಗೆ ಹೋಗಿ ನದಿಗೆ ಹಾರಿದ್ದಾರೆ.
ಸಾಯುವ ವಿಚಾರ ತಿಳಿಯುತ್ತಿದ್ದಂತೆ 12 ಹಾಗೂ 14 ವರ್ಷದ ಮಕ್ಕಳು ಅಮ್ಮನ ಕೈಯಿಂದ ತಪ್ಪಿಸಿಕೊಂಡು ಬಚಾವ್ ಆಗಿದ್ದಾರೆ. ಬಳಿಕ ಕಿರಿಮಗಳೊಂದಿಗೆ ನದಿಗೆ ಹಾರಿ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ರೋಣ ತಾಲ್ಲೂಕು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೃತ ದೇಹಗಳನ್ನು ಗ್ರಾಮಸ್ಥರು ಹೊರತೆಗೆದಿದ್ದು, ಇನ್ನಿಬ್ಬರು ಹೆಣ್ಣುಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.