ಹುಬ್ಬಳ್ಳಿ: ಜನ ಸಾಮಾನ್ಯರು ಯಾರು ಕೂಡಾ ಕಾಂಗ್ರೆಸ್ ನೀಡಿದ ಗ್ಯಾರಂಟಿ ಜಾರಿ ಕುರಿತಾಗಿ ಅನುಮಾನಪಡುವುದು ಬೇಡ.ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ನೀಡಿದ ಗ್ಯಾರಂಟಿ ಅನುಷ್ಠಾನ ದೇಶದಲ್ಲಿಯೇ ಐತಿಹಾಸಿಕ ನಿರ್ಣಯ. ಐದು ಗ್ಯಾರಂಟಿಯನ್ನು ಒಟ್ಟಿಗೆ ಜಾರಿಗೆ ಮಾಡುವ ನಿರ್ಧಾರ ತೆಗೆದುಕೊಳ್ಳಲು ತಾಕತ್ ಬೇಕು. ಅಂತಹ ಕೆಲಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೆಗೆದುಕೊಂಡಿದ್ದಾರೆ ಎಂದು ನವಲಗುಂದ ವಿಧಾನಸಭಾ ಮತಕ್ಷೇತ್ರದ ಶಾಸಕ ಎನ್.ಹೆಚ್.ಕೊನರೆಡ್ಡಿ ಹೇಳಿದರು.
ಇಲ್ಲಿನ ತಹಶೀಲ್ದಾರರ ಕಚೇರಿಯಲ್ಲಿ ತಮ್ಮ ಜನಸಂಪರ್ಕ ಕಚೇರಿಯನ್ನು ಉದ್ಘಾಟಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಮೊದಲೇ ನಮ್ಮ ಕೇಂದ್ರದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೇ, ಸೋನಿಯಾಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಸುರ್ಜೇವಾಲಾ, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು 100 ಕ್ಕೆ 100 ರಷ್ಟು ಗ್ಯಾರಂಟಿ ಜಾರಿ ಮಾಡತ್ತೇವೆ ಎಂದು ಮಾತು ಕೊಟ್ಟಿದ್ದಾರೆ. ಅದರಂತೆ ಒಂದು ಐತಿಹಾಸಿಕ ನಿರ್ಣಯ ತೆಗೆದುಕೊಂಡು ಐದು ಗ್ಯಾರಂಟಿ ಒಟ್ಟಿಗೆ ಜಾರಿ ಮಾಡಲು ಮುಂದಾಗಿದ್ದಾರೆ ಎಂದರು.
ರಾಜ್ಯದ ಜನರು ಗ್ಯಾರಂಟಿ ಕುರಿತಾಗಿ ಆತಂಕ ಪಡಬೇಕಾದ ಅವಶ್ಯಕತೆ ಇಲ್ಲ. ಎಲ್ಲ ವ್ಯವಸ್ಥಿತವಾಗಿ ಅರ್ಹ ಫಲಾನುಭವಿಗಳಿಗೆ ಯೋಜನೆ ತಲುಪಿಸುವ ಕಾರ್ಯ ಮಾಡಲಾಗುವುದು. ಜೂನ್ 11 ರಂದು ಮಹಿಳೆಯರಿಗೆ ಉಚಿತವಾಗಿ ಓಡಾಡಲು ಉಚಿತ ಬಸ್ಸಿನ ಯೋಜನೆ ಜಾರಿಯಾಗುತ್ತದೆ. ಅಂದು ನಾನು ಸಹ ಬಸ್ಸಿನಲ್ಲಿ ಪ್ರಯಾಣಿಸಿ ಮಹಿಳೆಯ ಪ್ರಯಾಣಕ್ಕೆ ಪ್ರೋತ್ಸಾಹ ನೀಡುತ್ತೇನೆ. ಜತೆಗೆ ಈಗಾಗಲೇ ಉಚಿತ ಅಕ್ಕಿ, ಯುವಕ-ಯುವತಿಗೆ 1500-3000 ಕೊಡುವುದು ಸೇರಿದಂತೆ ಎಲ್ಲವನ್ನೂ ಯಾವುದೇ ಗೊಂದಲವಿಲ್ಲದೇ ಅನುಷ್ಠಾನ ಮಾಡಲಾಗುವುದು ಎಂದರು.
ಬೆಲೆ ಏರಿಕೆ ಸಲುವಾಗಿಯೇ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ಜಾರಿಗೆ ತಂದಿದೆ. ಈ ವೇಳೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡತ್ತೇನೆ. ಲೋಕಸಭಾ ಚುನಾವಣೆ ಆಗಮಿಸುತ್ತಿದೆ. ಬೆಲೆ ಏರಿಕೆಯನ್ನು ಈವರೆಗೆ ನಿಯಂತ್ರಣ ಮಾಡಲಿಲ್ಲ. ಮಹದಾಯಿ ಕಳಸಾ-ಬಂಡೂರಿ ಯೋಜನೆ ಜಾರಿ ಮಾಡಲಿಲ್ಲ. ರೈತರಿಗೆ ಬೆಳೆ ವಿಮೆ ಕೊಡಲಿಲ್ಲ. ಇಂತಹ ಗಂಭೀರ ವಿಷಯಗಳ ಕುರಿತಾಗಿ ಇಂದು ಕೆಡಿಸಿ ಸಭೆಯಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ಮಾಡಲಾಗುವುದು ಎಂದರು.