ಧಾರವಾಡ : ಮತದಾನ ಜಾಗೃತಿಗಾಗಿ ಮಾದನಬಾವಿ ಗ್ರಾಮದ ಹುಚ್ಚಪ್ಪಜ್ಜನ ಕೆರೆಯ ಅಂಗಳದಲ್ಲಿ ಸ್ವೀಪ್ ಕಾರ್ಯಕ್ರಮ ನಡೆಯಿತು.
ನರೇಗಾ ಯೋಜನೆಯಡಿ ಕೆರೆ ಹೂಳೆತ್ತುವ ಕಾಮಗಾರಿ ಕೆಲಸಕ್ಕೆ ಆಗಮಿಸಿದ್ದ ಮಾದನಬಾವಿ ಗ್ರಾಮದ ಸುಮಾರು 200 ಜನ ಪುರುಷ ಮತ್ತು ಮಹಿಳಾ ಕೂಲಿ ಕಾರ್ಮಿಕರಿಗೆ ಮತದಾನದ ಮಹತ್ವ ತಿಳಿಸಲಾಯಿತು. ಜಿಲ್ಲಾ ಸ್ವೀಪ್ ನೂಡಲ್ ಅಧಿಕಾರಿ ಹಾಗೂ ಜಿಲ್ಲಾ ಪಂಚಾಯತ ಸಿಇಓ ಸ್ವರೂಪ ಟಿ.ಕೆ ಅವರು ಮಾತನಾಡಿ, ಮೇ 7 ರಂದು ಎಲ್ಲರೂ ಮತಗಟ್ಟೆಗೆ ಬಂದು ತಪ್ಪದೇ ಮತದಾನ ಮಾಡಬೇಕೆಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ವಿಜಯಕುಮಾರ ಆಜೂರ ಅವರು ಮಾತನಾಡಿ, ನರೇಗಾ ಯೋಜನೆಯಡಿ ಹೆಣ್ಣು- ಗಂಡು ಎಂಬ ಬೇಧವಿಲ್ಲ. ಎಲ್ಲರೂ ಸಮಾನರು ಮತ್ತು ಎಲ್ಲರಿಗೂ ಸಮಾನ ವೇತನವಿದೆ. ಅದರಂತೆ ಮತದಾನದಲ್ಲಿಯೂ ಪುರುಷ ಮತ್ತು ಮಹಿಳೆಗೆ ಸಮಾನ ಹಕ್ಕಿದೆ. ಇಬ್ಬರೂ ಮತಗಟ್ಟೆಗೆ ಬಂದು ಮತದಾನ ಮಾಡಬೇಕೆಂದು ತಿಳಿಸಿದರು.
ನರೇಗಾ ಕೂಲಿ ಕಾರ್ಮಿಕರು ಮತದಾನ ಜಾಗೃತಿ ಮತ್ತು ನರೇಗಾ ಯೋಜನೆಯ ಪ್ಲೇ ಕಾರ್ಡ್ ಗಳನ್ನು ಕೈಯಲ್ಲಿ ಹಿಡಿದು ಮತದಾನ ಜಾಗೃತಿ ಕುರಿತು ಘೋಷಣೆ ಕೂಗಿದರು. ನೆರೆದ ಎಲ್ಲರಿಗೂ ತರಬೇತಿದಾರ ಕೆ.ಎಂ. ಶೇಖ ಅವರು ಮತದಾರ ಪ್ರತಿಜ್ಞಾವಿಧಿ ಬೋಧಿಸಿದರು. ನರೇಗಾ ಧಾರವಾಡ ತಾಲೂಕು ಸಹಾಯಕ ನಿರ್ದೇಶಕ ಚಂದ್ರು ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು.