ಹುಬ್ಬಳ್ಳಿ : ಮಾಜಿ ಸಚಿವ ವಿನಯ್ ಕುಲಕರ್ಣಿ ಅವರು ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರದಿಂದ ಚುನಾವಣಾ ಕಣಕ್ಕಿಳಿದಿದ್ದು, ಇಂದು ಅವರ ಅನುಪಸ್ಥಿತಿಯಲ್ಲಿ ಅವರ ಪತ್ನಿ ಶಿವಲೀಲಾ ಕುಲಕರ್ಣಿ ಅವರು ಶಕ್ತಿ ಪ್ರದರ್ಶನದೊಂದಿಗೆ ಅಧಿಕೃತವಾಗಿ ವಿನಯ್ ಅವರ ಉಮೇದುವಾರಿಕೆ ಸಲ್ಲಿಸಿದ್ದಾರೆ. ಅದರ ಜೊತೆಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸಾಥ್ ನೀಡಿದರು.
ಧಾರವಾಡದ ಪ್ರಸಿದ್ಧ ಮುರುಘಾಮಠದಿಂದ ಮೆರವಣಿಗೆ ಮೂಲಕ ಧಾರವಾಡದ ಉಪವಿಭಾಗಾಧಿಕಾರಿ ಕಚೇರಿಗೆ ಬಂದ ಶಿವಲೀಲಾ ಅವರು, ವಿನಯ್ ಅವರ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆ ವೇಳೆ ಲಕ್ಷಾಂತರ ಜನ ಆಗಮಿಸಿದರು. ಈ ರ್ಯಾಲಿ ಯಲ್ಲಿ ವಿನಯ್ ಅವರ ಮಕ್ಕಳಾದ ವೈಶಾಲಿ, ದೀಪಾಲಿ ಹಾಗೂ ಹೇಮಂತ್ ಅವರು ಪಾಲ್ಗೊಂಡು ಜನರತ್ತ ಕೈಬೀಸಿ ತಮ್ಮ ತಂದೆಯನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ತೆರೆದ ವಾಹನದ ಮೂಲಕ ಶಿವಲೀಲಾ ಅವರು ಮೆರವಣಿಗೆ ನಡೆಸಿದರು. ವಿನಯ್ ಅವರ ಅಭಿಮಾನಿಗಳು ತೆರೆದ ವಾಹನದ ಮೇಲಿದ್ದ ನಾಯಕರ ಮೇಲೆ ಹೂಮಳೆಗರೆದರು. ಅಲ್ಲದೇ ಕ್ರೇನ್ ಮೂಲಕ ಮಾಲಾರ್ಪಣೆ ಕೂಡ ಮಾಡಿದರು. ಶಿವಲೀಲಾ ಅವರು ಉಪವಿಭಾಗಾಧಿಕಾರಿ ಕಚೇರಿಗೆ ನಾಮಪತ್ರ ಸಲ್ಲಿಸಲು ಬಂದ ವೇಳೆ ಮಾಜಿ ಸಚಿವ ಹಾಗೂ ಕಲಘಟಗಿ ಕಾಂಗ್ರೆಸ್ ಅಭ್ಯರ್ಥಿ ಸಂತೋಷ್ ಲಾಡ್ ಕೂಡ ಅವರಿಗೆ ಸಾಥ್ ನೀಡಿದರು.