ಧಾರವಾಡ: ದೌರ್ಜನ್ಯದಿಂದ ಮನೆ ತೆರವು ಮಾಡುತ್ತಿರುವ ಗೂಂಡಾಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಶ್ರೀರಾಮನಗರ ಬಡಾವಣೆಯ ಜನರು ಪ್ರತಿಭಟನೆ ನಡೆಸಿದರು.
ಖಾಸಗಿ ವ್ಯಕ್ತಿಗಳು ನಾವು ಕಳೆದ 30 ರಿಂದ 40 ವರ್ಷ ವಾಸವಿರುವ ಜಾಗ ನಿಮ್ಮದಲ್ಲ ಈ ಜಾಗ ನಮ್ಮದು ಎಂದು ಏಕಾಏಕಿ ಮನೆಗಳನ್ನು ಒಡೆದು ಹಾಕಿ ಹಾನಿಪಡಿಸುತ್ತಿದ್ದಾರೆ. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಕೆ ಮಾಡಲಾಗಿದೆ. ಕಳೆದ ಒಂದು ತಿಂಗಳ ಹಿಂದೆ ಒಂದು ಮನೆ ಹಾನಿ ಮಾಡಿದ್ದು, ಈಗ ಮತ್ತೆ ಮೂರು ಮನೆಗಳಿಗೆ ಹಾನಿ ಮಾಡಿದ್ದಾರೆ. ಈ ಕುರಿತು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ ಜನರ ರಕ್ಷಣೆಗೆ ಮುಂದಾಗಬೇಕು ಎಂದು ಆಗ್ರಹಿಸಿದರು.
ಏಕಾಏಕಿ ವಾಸವಿದ್ದ ಮನೆಯನ್ನು ಕೆಡವಿ ಹಾನಿ ಮಾಡುವುದು ಸರಿಯಲ್ಲ, ಖಾಸಗಿ ವ್ಯಕ್ತಿಗಳ ದಾಖಲೆಗಳನ್ನು ಜಿಲ್ಲಾಡಳಿತ ಪರಿಶೀಲನೆ ಮಾಡಬೇಕು, ಬಡ ಮದ್ಯಮ ವರ್ಗದ ಜನರು ವಾಸವಿರುವ ಮನೆಗಳನ್ನು ಕೆಡುವುದನ್ನು ತಡೆಗಟ್ಟುವ ಮೂಲಕ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.