ಧಾರವಾಡ: ಇಲ್ಲಿಯ ಜನ್ನತನಗರ ನಿವಾಸಿಗಳಿಗೆ ಎಲ್ ಆ್ಯಂಡ್ ಟಿ ಕಂಪೆನಿಯಿಂದ ಬೇಕಾಬಿಟ್ಟಿ ನೀರಿನ ಬಿಲ್ ವಿತರಿಸುತ್ತಿರುವುದನ್ನು ಖಂಡಿಸಿ ಸಮಗ್ರ ಪ್ರಜೆಗಳ ಧ್ವನಿ ಸಮಿತಿ ವತಿಯಿಂದ ಧಾರವಾಡ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಜನ್ನತನಗರ ಕೊಳಚೆ ಪ್ರದೇಶವಾಗಿದ್ದು, ಮೂಲ ಸೌಕರ್ಯ ವಂಚಿತವಾಗಿದೆ. ಈ ಮಧ್ಯೆ ಎಲ್ ಆ್ಯಂಡ್ ಟಿ ಕಂಪೆನಿಯಿಂದ ನೀರು ಸರಬರಾಜು ಆದಾಗಿನಿಂದ ಬೇಕಾಬಿಟ್ಟಿ ನೀರಿನ ಬಿಲ್ ವಿತರಣೆ ಮಾಡಲಾಗುತ್ತಿದೆ. ಕಡು ಬಡವರೇ ವಾಸಿಸುತ್ತಿರುವ ಈ ಪ್ರದೇಶದ ಕೆಲವರಿಗೆ 60 ಸಾವಿರ, 80 ಸಾವಿರದವರೆಗೆ ನೀರಿನ ಬಿಲ್ ನೀಡಲಾಗಿದೆ.ಇದು ಜನಪ್ರತಿನಿಧಿಗಳ ಮತ್ತು ಎಲ್ ಆ್ಯಂಡ್ ಟಿ ಕಂಪೆನಿ ಅಧಿಕಾರಿಗಳ ನಿರ್ಲಕ್ಷ ಧೋರಣೆಗೆ ಸಾಕ್ಷಿ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಕೊಳಚೆ ಪ್ರದೇಶದ ನಿವಾಸಿಗಳಿಗೆ ಸರ್ಕಾರದ ಆಶ್ರಯ ಯೋಜನೆಯಡಿ ಮನೆಗಳು ಹಂಚಿಕೆಯಾಗಿಲ್ಲ. ಸರಿಯಾದ ರೀತಿಯಲ್ಲಿ ಸಮೀಕ್ಷೆ ಮಾಡದೇ ಕಡು ಬಡವರಿಗೆ ಅನ್ಯಾಯ ಎಸಗಲಾಗಿದೆ. ಇಲ್ಲಿನ ಬಹುತೇಕ ಜನರು ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಆಶ್ರಯ ಮನೆಗಳು ಮರೀಚಿಕೆಯಾಗಿವೆ. ಸರ್ಕಾರದಿಂದ ನಿರ್ಮಿಸಲಾದ ಹಾಗೂ ಇತರೆ ಆಶ್ರಯ ಯೋಜನೆಗಳ ವಸತಿಗಳು ಕಳಪೆ ಗುಣಮಟ್ಟದ್ದಾಗಿವೆ. ಇವುಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಜರುಗಿಸಬೇಕು. ಕೊಳಚೆ ಪ್ರದೇಶ ಎಂದು ಪರಿಗಣಿಸಿ ತೆರಿಗೆಯನ್ನು ಕಡಿಮೆ ಮಾಡಬೇಕು. ಕೊಳಚೆ ಪ್ರದೇಶದಲ್ಲಿ ನಿರ್ಮಾಣವಾದ ಮನೆಗಳಿಗೆ ಹಕ್ಕುಪತ್ರ ವಿತರಣೆ ಮಾಡಬೇಕು ಎಂದು ಆಗ್ರಹಿಸಿದರು.