ಹುಬ್ಬಳ್ಳಿ: ಮಗಳು ನೇಹಾ ಕಗ್ಗೊಲೆ ಪ್ರಕರಣದಲ್ಲಿ ನಮಗೆ ನ್ಯಾಯ ನೀಡಿ, ದಯವಿಟ್ಟು ಹಿಂದೂ ಯುವತಿಯರ ಜೀವಕ್ಕೆ ಗ್ಯಾರಂಟಿ ಕೊಡಿಸಿ, ಮಕ್ಕಳ ಅಮೂಲ್ಯ ಜೀವ ಉಳಿಸಿಕೊಡಿ, ಇದು ನಿಮ್ಮಿಂದ ಮಾತ್ರವೇ ಸಾಧ್ಯ ಎಂದು ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ್ ಜೋಶಿ ಬಳಿ ಕೊಲೆಯಾದ ನೇಹಾ ಹಿರೇಮಠ ಅವರ ತಂದೆ ನಿರಂಜನ್ ಹಿರೇಮಠ ಮನವಿ ಮಾಡಿಕೊಂಡಿರುವ ಘಟನೆ ನಡೆದಿದೆ.
ಕಾಲೇಜು ಕ್ಯಾಂಪಸ್ನಲ್ಲೇ ಹೀಗೆ ಹತ್ಯೆ ನಡೆದರೆ ಹಿಂದೂ ಹೆಣ್ಣು ಮಕ್ಕಳು ವಿದ್ಯಾಭ್ಯಾಸ ಮಾಡೋದಾದರೂ ಹೇಗೆ? ಸರ್ಕಾರದವರು ಇಂಥ ನೀಚರಿಗೆ ಕಠಿಣ ಶಿಕ್ಷೆ ಕೊಡಲಿ. ಹಿಂದೂ ಹೆಣ್ಣುಮಕ್ಕಳ ಹತ್ಯೆ ಇಲ್ಲಿಗೇ ಕೊನೆಗಾಣಿಸಿ ಎಂದು ನೇಹಾ ಸೋದರತ್ತೆ ಸಚಿವ ಜೋಶಿ ಅವರಲ್ಲಿ ಕಣ್ಣೀರಿಡುತ್ತಲೇ ಕೇಳಿಕೊಂಡರು.
ಅಂದ ಚೆಂದದ ಹಿಂದೂ ವಿದ್ಯಾರ್ಥಿ-ಯುವತಿಯರೇ ಟಾರ್ಗೆಟ್ ಆಗುತ್ತಿದ್ದಾರೆ. ನಾನು ಕಾರ್ಪೋರೇಟ್ ಇದ್ದೇನೆ. ನನ್ನ ಮಗಳಿಗೇ ಹೀಗಾದರೆ ಸಾಮಾನ್ಯರ ಮಕ್ಕಳ ಗತಿ ಏನು? ಹಾಗಾಗಿ ಇದಕ್ಕೊಂದು ತಕ್ಕ ಶಾಸ್ತಿ ಆಗಲೇಬೇಕು ಎಂದು ಅವರು ಪ್ರಲ್ಹಾದ್ ಜೋಶಿ ಅವರಲ್ಲಿ ಒತ್ತಾಯಿಸಿದರು.
ತಮ್ಮ ಮಗಳ ಹತ್ಯೆ ಪ್ರಕರಣದಲ್ಲಿ ಕೊಡುವ ಶಿಕ್ಷೆ ಕ್ರೂರ ಮನಸ್ಥಿತಿಯುಳ್ಳವರಿಗೆ ಪಾಠವಾಗಬೇಕು. ಒಂದು ಮಾದರಿ ಶಿಕ್ಷೆಯಾಗಬೇಕು. ಹೇಗಾದರೂ ಮಾಡಿ ಇಂಥ ನೀಚರನ್ನು ಮಟ್ಟ ಹಾಕಬೇಕು ಸರ್. ಇಲ್ಲದಿದ್ರೆ ನಮಗೆ ಉಳಿಗಾಲವಿಲ್ಲ ಎಂದು ನೇಹಾ ತಂದೆ, ಕಾರ್ಪೋರೇಟರ್ ನಿರಂಜನ್ ಅವರು ಕೇಂದ್ರ ಸಚಿವರಲ್ಲಿ ಮನವಿ ಮಾಡಿದರು.