ಕುಂದಗೋಳ: ನಾಮಪತ್ರ ಸಲ್ಲಿಕೆಯ ಕೊನೆಯ ದಿನ ಹತ್ತಿರವಾಗುತ್ತಿದ್ದಂತೆ ಅಭ್ಯರ್ಥಿಗಳು ಶಕ್ತಿ ಪ್ರದರ್ಶನದ ಮೂಲಕ ಉಮೇದುವಾರಿಕೆ ಸಲ್ಲಿಸುತ್ತಿದ್ದಾರೆ. ಅದರಂತೆ ತೀವ್ರ ಕುತೂಹಲ ಕೆರಳಸಿದ ಕುಂದಗೋಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಮ್.ಆರ್.ಪಾಟೀಲ್ ಇಂದು ಬೃಹತ್ ರೋಡ್ ಶೋ ನಡೆಸಿ ಮತ್ತೊಮ್ಮೆ ನಾಮಪತ್ರ ಸಲ್ಲಿಕೆ ಮಾಡಿದರು.
ಕುಂದಗೋಳ ಪಟ್ಟಣದ ಗಾಳಿ ಮರೆಮ್ಮ ದೇವಸ್ಥಾನದಿಂದ ತೆರದ ವಾಹನದಲ್ಲಿ ಸಾವಿರಾರು ಕಾರ್ಯಕರ್ತರು, ಚಾಂಜ್ ಮೇಳ, ಕರಡಿ ಕುಣಿತ, ಮಜಲು ಸೇರಿದಂತೆ ಇನ್ನಿತರ ಕಲಾತಂಡಗಳೊಂದಿಗೆ ಕಾಳಿದಾಸ ನಗರ, ಮಾರುಕಟ್ಟೆ ಮಾರ್ಗವಾಗಿ ತಹಶಿಲ್ದಾರರವರೆಗೆ ಆಗಮಿಸಿದರು. ಈ ವೇಳೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸೇರಿದಂತೆ ಇನ್ನಿತರ ನಾಯಕರು ಸಾಥ್ ಕೊಟ್ಟರು.
ರೋಡ್ ಶೋ ದಲ್ಲಿ ಕೇಸರಿ ಶಾಲು, ಕಮಲ ಧ್ವಜ ರಾರಾಜಿಸಿದವು. ಕಾರ್ಯಕರ್ತರು ಪಾಟೀಲ್… ಪಾಟೀಲ್ ಎಮ್.ಆರ್.ಪಾಟೀಲ್ ಎಂಬ ಘೋಷಣೆ ಕೂಗಿದರು. ಇದರ ಜೊತೆಗೆ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಸಿ.ಸಿ.ಪಾಟೀಲ ಅವರ ಪರವಾದ ಘೋಷಣೆಗಳು ಮೊಳಗಿದವು.