ಕಲಘಟಗಿ: ತಾಲೂಕಿನಲ್ಲಿ ಬರದ ಛಾಯೆಯಿಂದ ರೈತರು ಸಂಕಷ್ಟಕ್ಕೀಡಾದರೂ ಬರಪೀಡಿತ ಪ್ರದೇಶ ಘೋಷಣೆಯಲ್ಲಿ ಕಲಘಟಗಿಯನ್ನು ಕೈಬಿಟ್ಟಿದ್ದನ್ನು ಖಂಡಿಸಿ ಸೆ.20 ರಂದು ಕಲಘಟಗಿ ಬಂದ್ ಮಾಡುವ ಮೂಲಕ ಸರ್ಕಾರದ ವಿರುದ್ಧ ಹೋರಾಟ ಮಾಡಲಾಗುವುದು ಎಂದು ಬಿಜೆಪಿ ಮುಖಂಡ ಶಶಿಧರ ನಿಂಬಣ್ಣವರ್ ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಮಾತನಾಡಿ, ಸಮರ್ಪಕ ಮಳೆ ಬಾರದೆ ಕ್ಷೇತ್ರದ ರೈತರು ಬಿತ್ತನೆ ಮಾಡಿದ ಭತ್ತ, ಕಬ್ಬು, ಸೋಯಾ ಅವರೇ, ಗೋವಿನ ಜೋಳ ಮುಂತಾದ ಬೆಳೆಗಳು ಹಾನಿಗೊಳಗಾಗಿವೆ.ಇದನ್ನು ಗಮನ ಹರಿಸದೆ ಇದ್ದರಿಂದ ಕೃಷಿಕ ವರ್ಗದ ಜನರು, ಕೂಲಿ ಕಾರ್ಮಿಕರು ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದಾರೆ.
ಇದನ್ನು ಗಮನಹರಿಸದೆ ಸರ್ಕಾರ ಹಾಗೂ ಕೃಷಿ-ಕಂದಾಯ ಇಲಾಖೆ ಸರಿಯಾದ ಸಮೀಕ್ಷೆಯನ್ನು ಮಾಡಿ ಸರ್ಕಾರಕ್ಕೆ ಕಳುಹಿಸದೆ ನಿರ್ಲಕ್ಷ್ಯ ಮಾಡಿದ್ದು, ಸರ್ಕಾರವು ತಾಲೂಕಿನೊಂದಿಗೆ ಮಲತಾಯಿ ಧೋರಣೆ ಅನುಸರಿಸಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು. ಕಲಘಟಗಿ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಸಂತೋಷ ಲಾಡ್ ಈ ಭಾಗದ ರೈತರ ಹಿತವನ್ನು ಕಾಪಾಡಬೇಕೆಂದು ಆಗ್ರಹಿಸಿದರು.