ಹುಬ್ಬಳ್ಳಿ: ಚುನಾವಣೆಗೂ ಮುನ್ನವೇ ನಮ್ಮಲ್ಲಿ ಟಿಕೆಟ್ ಘೋಷಣೆ ಮಾಡಲ್ಲ. ಚುನಾವಣೆ ಘೋಷಣೆಯಾದ ನಂತರ ಬಿಜೆಪಿಯ ಮೊದಲ ಪಟ್ಟಿ ಬಿಡುಗಡೆಯಾಗುತ್ತದೆ. ಪ್ರತಿ ಚುನಾವಣೆಯಲ್ಲಿ ಹಾಲಿ ಶಾಸಕರಿಗೆ ಟಿಕೆಟ್ ಕೊಟ್ಟ ಉದಾಹರಣೆ ಇದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.
ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಒಳ ಮೀಸಲಾತಿ ವಿರೋಧಿಸಿ ಬಿಎಸ್ ವೈ ನಿವಾಸದ ಮೇಲೆ ಕಲ್ಲು ತೂರಾಟ ವಿಚಾರವಾಗಿ ಮಾತನಾಡಿದ ಅವರು, ತಪ್ಪು ಗ್ರಹಿಕೆಯಿಂದ ಈ ಘಟನೆ ನಡೆದಿದೆ. ಈ ರೀತಿಯ ಕಲ್ಲು ತೂರಾಟ ಪ್ರಕರಣ ನಡೆಯಬಾರದಿತ್ತು. ಒಳಮೀಸಲಾತಿ ಸಂಬಂಧ ಸಚಿವ ಸಂಪುಟ ಉಪ ಸಮಿತಿ ಮಾಡಲಾಗಿತ್ತು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮೀಸಲಾತಿ ಪ್ರಕ್ರಿಯೆ ಮಾಡಲಾಗಿದೆ. ಒಳ ಮೀಸಲಾತಿ ಬಹಳ ವರ್ಷಗಳ ಬೇಡಿಕೆಯಾಗಿತ್ತು. ಒಳ ಮೀಸಲಾತಿ ಕುರಿತ ಗೊಂದಲದಿಂದಾಗಿ ಈ ಘಟನೆ ಸಂಭವಿಸಿದೆ. ಆದರೆ, ಕಾಂಗ್ರೆಸ್ ಇದರಲ್ಲಿಯೂ ರಾಜಕಾರಣ ಮಾಡಲು ಹೊರಟಿದೆ ಎಂದು ಹೇಳಿದರು.
ಈ ಬಾರಿ ಹಾಲಿ ಶಾಸಕರಿಗೆ ಟಿಕೆಟ್ ಕೊಡಲ್ಲ ಅನ್ನೋ ಮಾತು ಯಾಕೆ ಕ್ರಿಯೇಟ್ ಆಗಿದೆ ಗೊತ್ತಿಲ್ಲ. ವಯಸ್ಸು, ಗೆಲ್ಲುವ ಮಾನದಂಡ ಇತ್ಯಾದಿ ಕಾರಣಗಳಿಂದಾಗಿ ಕೆಲ ಹಾಲಿ ಶಾಸಕರಿಗೆ ಟಿಕೆಟ್ ತಪ್ಪಬಹುದು. ಕೆಲವರು ತಾವಾಗಿಯೇ ಹಿಂದೆ ಸರಿಯಬಹುದು ಎಂದರು.
ರಾಹುಲ್ ಗಾಂಧಿ ಕೋಲಾರ ಭೇಟಿ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಅವರು, ರಾಹುಲ್ ಗಾಂಧಿ ಬಂದಷ್ಟು ಕಾಂಗ್ರೆಸ್ ಅವಸಾನಕ್ಕೆ ಕಾರಣವಾಗುತ್ತದೆ. ರಾಹುಲ್ ಗಾಂಧಿ ಎಲ್ಲೆಲ್ಲಿ ಬಂದಿದ್ದಾರೋ ಅಲ್ಲೆಲ್ಲಾ ಕಾಂಗ್ರೆಸ್ ಗೆ ಡ್ಯಾಮೇಜ್ ಆಗಿದೆ. ರಾಹುಲ್ ಗಾಂಧಿ ಬಂದು ಹೋಗುವುದರಿಂದ ಬಿಜೆಪಿಗೆ ಏನು ತೊಂದರೆ ಇಲ್ಲ ಎಂದರು.