ಹುಬ್ಬಳ್ಳಿ: ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ದೊರೆಯುವಂತೆ ಮಾಡಲು ಪ್ರಯತ್ನ ನಡೆಯುತ್ತಿದೆ. ಅಲ್ಲದೆ ಶೆಟ್ಟರ್ ಅವರ ಮನವೊಲಿಕೆ ಪ್ರಯತ್ನ ಮಾಡಿದ್ದೇವೆ. ನಿನ್ನೆ ಧರ್ಮೇಂದ್ರ ಪ್ರಧಾನ ಬಳಿ ಚರ್ಚೆ ಮಾಡಿದ್ದೇನೆ. ಬಿಜೆಪಿಗೆ ಶೆಟ್ಟರ್ ಅತ್ಯಂತ ನಿಷ್ಠರು. ಉತ್ತರ ಕರ್ನಾಟಕ ಭಾಗಕ್ಕೆ ಅತ್ಯಂತ ಅವಶ್ಯಕವಾಗಿದ್ದಾರೆ. ಅವರನ್ನು ಉಳಿಸಿಕೊಳ್ಳಬೇಕೆಂದು ಹೇಳಿದ್ದೇನೆಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದ ಅವರ ನಿವಾಸದ ಬಳಿ ಮಾತನಾಡಿದ ಅವರು, ಶೆಟ್ಟರ್ ಅವರು ಅತ್ಯಂತ ಅವಶ್ಯಕತೆ ಇರುವ ನಾಯಕ. ನಡ್ಡಾ ಅವರ ಜೊತೆ ಮಾತನಾಡಿದ್ದೇನೆ. ಅವರನ್ನು ಉಳಿಸಿಕೊಳ್ಳುವ ವಿಶ್ವಾಸ ಇದೆ ಎಂದರು.
ಶೆಟ್ಟರ್ ಗೆ ಟಿಕೆಟ್ ತಪ್ಪಲು ಕಾರಣ ನೀವು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಇದು ಸುಳ್ಳು ವದಂತಿ, ಯಾರೂ ಅದನ್ನು ನಿರೀಕ್ಷೆ ಮಾಡಬಾರದು. ಅತ್ಯಂತ ಪ್ರಾಮಾಣಿಕವಾಗಿ ಶೆಟ್ಟರ್ ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದೇವೆ. ಹೇಳುವವರು ನೂರಾರು ಹೇಳ್ತಾರೆ, ಶೆಟ್ಟರ್ ನಾವು ಆತ್ಮೀಯರು ಎಂದರು.
ಇನ್ನು ಇವತ್ತು ನಾನು ನಾಮಪತ್ರ ಸಲ್ಲಿಸುತ್ತಿದ್ದೇನೆ. ಒಳ್ಳೆ ಮುಹೂರ್ತ ಇರೋ ಕಾರಣ ನಾಮಪತ್ರ ಸಲ್ಲಿಸುತ್ತಿದ್ದೇನೆ. ಇವತ್ತು ಇಡಿ ದಿನ ಕ್ಷೇತ್ರದಲ್ಲಿ ಇರುತ್ತೇನೆ. ನಮಗೆ ಬಹುಮತ ದೊರೆಯುವ ವಿಶ್ವಾಸವಿದೆ. ಉಳಿದ ಕ್ಷೇತ್ರಕ್ಕೆ ಇನ್ನೆರಡು ದಿನಗಳಲ್ಲಿ ಅಭ್ಯರ್ಥಿಗಳನ್ನು ತೀರ್ಮಾನ ಮಾಡಲಾಗುತ್ತದೆ. 12 ಕ್ಷೇತ್ರಗಳ ಬಗ್ಗೆ ಚರ್ಚೆಯಾಗಿದೆ ಎಂದರು.