ಹುಬ್ಬಳ್ಳಿ: ರೈತನ ಬಗ್ಗೆ ಯಾರೇ ಅವಹೇಳನಕಾರಿ ಹೇಳಿಕೆ ನೀಡುವುದಾಗಲಿ, ಡಿ ಗ್ರೇಡ್ ಪದವನ್ನು ಸಚಿವ, ಶಾಸಕರು ಹೆಚ್ಚಾಗಿ ಮುಖ್ಯಮಂತ್ರಿಗಳು ಬಳಸಿದರೇ ಅವರು ಅಧಿಕಾರದಿಂದ ಕೆಳಗೆ ಇಳಿಯುವವರೆಗೂ ರೈತ ಸಂಘಟನೆಗಳಿಂದ ಹೋರಾಟ ಶತಸಿದ್ದ ಎಂದು ಕರ್ನಾಟಕ ರಾಜ್ಯ ರೈತ ಸಂಘಗಳ ಒಕ್ಕೂಟದ ರೈತ ಮುಖಂಡ ದಯಾನಂದ ಪಾಟೀಲ ಹೇಳಿದರು.
ನಗರದಲ್ಲಿಂದು ಮಾತನಾಡಿದ ಅವರು, ರಾಜ್ಯದಲ್ಲಿ ರೈತನಿಗೆ ಹೆಣ್ಣು ಸಿಗುತ್ತಿಲ್ಲ, ಸರ್ಕಾರಿ ನೌಕರಿ ಇದ್ದರೆ ಮಾತ್ರ ಹೆಣ್ಣುಕೊಡುವ ಪದ್ದತಿ ಜಾರಿಯಾಗುತ್ತಿದೆ. ಸರ್ಕಾರ ನಾಲ್ಕು ಗ್ಯಾರಂಟಿಗಳಂತೆ ರೈತನಿಗಾಗಿ ಗ್ಯಾರಂಟಿ ಘೋಷಣೆ ಮಾಡಲಿ ಎಂದು ಒತ್ತಾಯಿಸಿದರು. ಸಾಕಷ್ಟು ರೈತರು ಬೆಳೆವಿಮೆ ಮಾಡಿಸಿದ್ದಾರೆ. ಆದರೆ ಈವರೆಗೆ ರೈತನಿಗೆ ಸಿಕ್ಕಿದ್ದು ಶೇ.10 ರಷ್ಟು ಮಾತ್ರ ಪರಿಹಾರ. ಆ ಹಣದಲ್ಲಿ ರೈತರು ಉದ್ದಾರ ಆಗೋದಕ್ಕೆ ಸಾಧ್ಯವಿದೆಯೇ? ಹೆಚ್ಚಾಗಿ ಬದಕುವುದಕ್ಕೆ ಸಾಧ್ಯವಿದೆಯೇ? ಇವತ್ತು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಾಲಬಾಧೆಯಿಂದ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಬಗ್ಗೆ ಸರ್ಕಾರ ಸಾಂತ್ವನ ಹೇಳುವ ಕೆಲಸ ಮಾಡಿದಿಯೇ? ಎಂದು ಪ್ರಶ್ನೆ ಮಾಡಿದರು.
ಬರ ಪರಿಹಾರ ಘೋಷಣೆಯನ್ನು ಸರ್ಕಾರ ಇದೀಗ ಘೋಷಣೆ ಮಾಡಿದೆ. ಆದರೆ ಆ ಹಣ ಎಷ್ಟು ಫಲಾನುಭವಿಗಳಿಗೆ ತಲುಪಿವೆ? ಈ ಬಗ್ಗೆ ವೈಜ್ಞಾನಿಕ ಬೆಲೆ ನಿಗಧಿಗೆ ಸಮಿತಿ ರಚನೆ ಮಾಡಿ, ಬೆಲೆ ಕಟ್ಟಲು ಸಚಿವರಿಗೆ ಮನವಿ ಮಾಡಿದ್ದೇವೆ. ಆದರೆ ರೈತರ ಬಗ್ಗೆ ಸಚಿವರು ಉಡಾಫೆ ಮಾತು, ಅಶಿಸ್ತು ಉತ್ತರ ನೀಡುವುದು ಸರಿಯಲ್ಲ ಎಂದು ಹರಿಹಾಯ್ದರು.