ಧಾರವಾಡ: ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ರಾಜಕೀಯವಾಗಿ ಮುಗಿಸಬೇಕು ಎಂದು ಸಾಕಷ್ಟು ಪ್ರಯತ್ನ ನಡೆಯಿತು. ಆದರೆ ಅವರು ರಾಜಕೀಯವಾಗಿ ಮತ್ತೆ ಪುಟಿದೇಳುತ್ತಾರೆ ಎಂದು ಕಾಂಗ್ರೆಸ್ ವಕ್ತಾರ ನಿಕೇತ್ ರಾಜ್ ಮೌರ್ಯ ಹೇಳಿದರು. ಧಾರವಾಡ ತಾಲೂಕು ಗರಗ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿನಯಕ ಕುಲಕರ್ಣಿ ಅವರ ಪರ ಮತಯಾಚನೆ ಸಭೆಯಲ್ಲಿ ಮಾತನಾಡಿದರು.
ಚುನಾವಣೆ ಬಂದಾಗ ಬಿಜೆಪಿಯವರು ಹಣದ ಹೊಳೆ ಹರಿಸುತ್ತಾರೆ. ಪ್ರತಿ ವರ್ಷ ನಮಗೇ ಗೊತ್ತಿಲ್ಲದೆ ನಮ್ಮ ಜೇಬಿನಿಂದ ಒಂದೂವರೆ ಲಕ್ಷ ರೂ. ಟ್ಯಾಕ್ಸ್ ವಸೂಲಿ ಮಾಡುತ್ತಾರೆ. ಇದೇ ಹಣ ನಮಗೆ ಕೊಟ್ಟು ಚುನಾವಣೆ ಮಾಡುತ್ತಾರೆ. ಈ ಬಾರಿ ಚುನಾವಣೆಯಲ್ಲಿ ಮತಕೇಳಲು ಬಂದಾಗ ಜನ ಇದನ್ನು ಪ್ರಶ್ನೆ ಮಾಡಬೇಕು. ವಿನಯ್ ಈ ಭಾಗದ ದೊಡ್ಡ ನಾಯಕರು. ಅವರನ್ನು ಹತ್ತಿಕ್ಕುವ ಪ್ರಯತ್ನ ಯಶಸ್ವಿಯಾಗುವುದಿಲ್ಲ ಎಂದರು.
ವಿನಯ್ ಪತ್ನಿ ಶಿವಲೀಲಾಕುಲಕರ್ಣಿ ಮಾತನಾಡಿ ವಿನಯ್ ಕುಲಕರ್ಣಿ ಬಗ್ಗೆ ಹೊರಗಿನವರು ಏನು ಹೇಳಬೇಕಿಲ್ಲ. ಈ ಭಾಗದ ಜನರಿಗೆ ಉದ್ಯೋಗ ನೀಡಬೇಕೆಂಬ ಉದ್ದೇಶದಿಂದ ಮಾರ್ಕೋಪೊಲೋದಂತಹ ಕಂಪನಿ ತಂದು ಯುವಕರಿಗೆ ಉದ್ಯೋಗ ನೀಡುವ ಕಾರ್ಯ ಮಾಡಿದ್ದಾರೆ. ಈ ನಿಟ್ಟಿನ್ಲಲಿ ಈ ಭಾರಿ ಅವರನ್ನು ಬೆಂಬಲಿಸಿದ್ದೇ ಆದಲ್ಲಿ ಯುವಕರಿಗೆ ಉಜ್ವಲ ಭವಿಷ್ಯವಿದೆ ಎಂದರು.