ಧಾರವಾಡ: ಅಧಿಕಾರಿಗಳು ತಮ್ಮ ಇಲಾಖೆ ವ್ಯಾಪ್ತಿಯ ಯೋಜನಾ ಕಾರ್ಯಕ್ರಮಗಳ ಅಂಕಿ ಅಂಶಗಳನ್ನು ಕಡ್ಡಾಯವಾಗಿ ಕ್ರೂಡೀಕರಿಸಿಕೊಂಡು ಸಭೆಗೆ ಮಾಹಿತಿ ನೀಡಬೇಕೆಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಅವರು ತಿಳಿಸಿದರು.
ತಾಲೂಕ ಪಂಚಾಯತ್ ಸಭಾಭವನದಲ್ಲಿ ಜರುಗಿದ ಧಾರವಾಡ, ಕಲಘಟಗಿ ಹಾಗೂ ಅಳ್ನಾವರ ತಾಲೂಕುಗಳ ಮತಕ್ಷೇತ್ರದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಧಿಕಾರಿಗಳು ನಿಖರವಾದ ಅಂಕಿ ಅಂಶಗಳನ್ನು ನೀಡುವುದರಿಂದ ಉತ್ತಮವಾದ ಯೋಜನಾ ಕಾರ್ಯಕ್ರಮಗಳನ್ನು ರೂಪಿಸಬಹುದಾಗಿದೆ ಎಂದು ಸಚಿವರು ತಿಳಿಸಿದರು.
2013-2018 ರಲ್ಲಿ ರೈತರಿಗೆ ವಿವಿಧ ಕೃಷಿ ಉಪಕರಣಗಳ ಮೇಲೆ ರಿಯಾಯಿತಿ ಇತ್ತು. ರೈತರಿಗೆ ಅನುಕೂಲವಾಗುತ್ತದೆಂದು ಈ ಕ್ರಮ ಕೈಗೊಳ್ಳಲಾಗಿದೆಂದರು. ಕೃಷಿ ಹಾಗೂ ಕಂದಾಯ ಇಲಾಖೆಗಳ ನಡುವೆ ಸರಿಯಾದ ಹೊಂದಾಣಿಕೆ ಇರತಕ್ಕದ್ದು, ಕೃಷಿ ಜಮೀನು , ಕೃಷಿಯೇತರ ಜಮೀನು, ಕೊಳವೆ ಬಾವಿಗಳ ಅಂಕಿ ಅಂಶಗಳು ಸರಿಯಾಗಿ ತಾಳೆಯಾಗಬೇಕೆಂದರು.
ಕಲಘಟಗಿ ಜಲಜೀವನ್ ಮಿಷನ್ ಯೋಜನೆಯಡಿ 27 ಕೋಟಿ ರೂ.ಗಳಲ್ಲಿ ಶೇ.60% ಕಾರ್ಯ ಮುಗಿದಿದ್ದು ನೀರು ಸರಾಗವಾಗಿ ಸಾಗಲು ಚರಂಡಿ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಹೇಳಬೇಕು. ಅಪೂರ್ಣ ಕಾಮಗಾರಿಯಾದರೆ ಹಣ ಬಿಡುಗಡೆ ಮಾಡದಂತೆ ಅಧಿಕಾರಿಗಳು ಕ್ರಮ ವಹಿಸಬೇಕೆದರು. ಕಲಘಟಗಿಯಲ್ಲಿ ಆಧುನಿಕ ಮಾದರಿಯಾಗಿರುವ ಇ-ಲೈಬ್ರರಿ, ಡಿಜಿಟಲ್ ರೂಮ್ ಆರಂಭಿಸುವ ಬಗ್ಗೆ ಸಚಿವರು ಗ್ರಂಥಾಲಯ ಅಧಿಕಾರಿಗಳೊಂದಿಗೆ ಚರ್ಚಿಸಿದರು. ತಮ್ಮ ಮತ ಕ್ಷೇತ್ರದಲ್ಲಿ 560ಕಿ.ಮೀ ರಸ್ತೆ ಅಭಿವೃದ್ಧಿಗೆ ಪ್ರಸ್ತಾವನೆ ತಯಾರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕಲಘಟಗಿಯಲ್ಲಿ 33 ಪ್ರಾಥಮಿಕ ಶಾಲೆಗಳು 8 ಹೈಸ್ಕೂಲ್ಗಳು ರಿಪೇರಿಯಾಗಬೇಕಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ತಿಳಿಸಿದರು. ಒಟ್ಟು 28 ಶಾಲೆಗಳು ನೆಲಸಮ ಆಗಬೇಕಿದ್ದು ಪಿಡಬ್ಲ್ಯೂಡಿ ಅಧಿಕಾರಿಗಳು ಪರಿಶೀಲಿಸಿ ವರದಿ ನೀಡಿದ ಬಳಿಕ ಕ್ರಮ ಕೈಗೊಳ್ಳಲಾಗುವುದೆಂದರು. ಕಲಘಟಗಿ ತಾಲೂಕಿನಲ್ಲಿ 13 ಸಾವಿರ ಜಾನುವಾರುಗಳಿಗೆ ಲಸಿಕೆ ನೀಡಲಾಗಿದೆಯೆಂದು ಪಶು ಸಂಗೋಪನ ಅಧಿಕಾರಿ ತಿಳಿಸಿದರು. 52,600 ಪಡಿತರ ಚೀಟಿಗಳಿದ್ದು, ಈ ಪೈಕಿ 1,850 ಅಂತ್ಯೋದಯ, 12,023 ಬಿಪಿಎಲ್ ಕಾರ್ಡುದಾರರಿದ್ದಾರೆಂದು ಆಹಾರ ಇಲಾಖೆ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.
ದೊಡ್ಡ ಕೆರೆಗಳಾದ ನಿಗದಿ ಹಾಗೂ ಮುಗದ ಕೆರೆಗಳ ರಕ್ಷಣೆ ಹಾಗೂ ಸೌಂದರ್ಯ ಕಾರಣಕ್ಕೆ ಯೋಜನೆ ರೂಪಿಸುವಂತೆ ನೀರಾವರಿ ಅಧಿಕಾರಿಗಳಿಗೆ ಸಚಿವರು ಸೂಚಿಸಿದ್ದಲ್ಲದೆ, ಕಲಘಟಗಿ ತಾಲೂಕಿನ ಒಟ್ಟು ಜಲಾನಯನ ಕ್ಷೇತ್ರವನ್ನು ಸಮೀಕ್ಷೆ ಮಾಡುವಂತೆ ಉಪ ವಿಭಾಗಾಧಿಕಾರಿ ಅಶೋಕ್ ತೇಲಿ ಅವರಿಗೆ ತಿಳಿಸಿದರು.
ಮುಂಬರುವ ಪರಿಸರ ದಿನಾಚರಣೆಗೆ 50 ಲಕ್ಷದ ಮೊತ್ತದ 2 ಲಕ್ಷ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ಈ ಹಿನ್ನೆಲೆಯಲ್ಲಿ ಸಸಿಗಳ ತಯಾರಿಕೆ ಸಿದ್ಧತೆ ಕೈಗೊಳ್ಳುವಂತೆ ಸಚಿವರು ವಲಯ ಅರಣ್ಯ ಅಧಿಕಾರಿಗಳಿಗೆ ಸೂಚಿಸಿದರು.
ಟಾಟಾ ಮಾರ್ಕೊ ಪೋಲೋ ಕಂಪನಿಯ 402 ನೌಕರರನ್ನು ದಿಡೀರನೆ ಬೇರೆ ರಾಜ್ಯಕ್ಕೆ ವರ್ಗಾಯಿಸಿದ ಪ್ರಕರಣವನ್ನು ಶಾಂತಿಯುತವಾಗಿ ಬಗೆಹರಿಸುವಂತೆ ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಶಾಂತಿ ಸಮಿತಿಯನ್ನು ಸ್ಥಾಪಿಸಿ, ಕಂಪನಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸುವಂತೆ ಸೂಚಿಸಿದರು. ಸಭೆಯಲ್ಲಿ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.