ಧಾರವಾಡ: 58 ವರ್ಷಗಳ ಕಾಲ ಈ ದೇಶವನ್ನು ಆಳಿದ ಕಾಂಗ್ರೆಸ್ ಇನ್ನೂ ಕೂಡ ಕರೆಂಟ್ ಕೊಡ್ತೀವಿ, ಅಕ್ಕಿ ಕೊಡ್ತೀವಿ ಎಂಬ ಆಶ್ವಾಸನೆಯನ್ನೆ ನೀಡಿದೆ. ಹಾಗಿದ್ದರೆ ಇಷ್ಟು ವರ್ಷ ಅಧಿಕಾರದಲ್ಲಿದ್ದ ಕಾಂಗ್ರೆಸ್ ಏನು ಮಾಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರಶ್ನೆ ಮಾಡಿದ್ದಾರೆ.
ಧಾರವಾಡದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪ್ರತಿಯೊಬ್ಬರಿಗೆ 10 ಕೆಜಿ ಅಕ್ಕಿ ಕೊಡುವ ಭರವಸೆ ನೀಡಿದೆ. ನಾವು ಈಗಾಗಲೇ 5 ಕೆಜಿ ಕೊಡುತ್ತಿದ್ದೇವೆ. ಅದೇ ನಾವು 10 ಕೆಜಿ ಕೊಡುತ್ತಿದ್ದರೆ ಕಾಂಗ್ರೆಸ್ನವರು 20 ಕೆಜಿ ಕೊಡುತ್ತೇವೆ ಎಂದು ಆಶ್ವಾಸನೆ ನೀಡುತ್ತಿದ್ದರು. ಕಾಂಗ್ರೆಸ್ ಗರೀಬಿ ಹಠಾವೋ, ರೋಟಿ ಕಪಡಾ ಮಕಾನ್ ಎಂದೆಲ್ಲ ಹೇಳಿತ್ತು. ಅವೆಲ್ಲ ಕಾಂಗ್ರೆಸ್ ಅವಧಿಯಲ್ಲಿ ಈಡೇರಿದೆಯಾ? ಅವೆಲ್ಲ ಆಗಿದ್ರೆ ಈಗ ಏಕೆ 10 ಕೆಜಿ ಅಕ್ಕಿ ಕೊಡುವ ಮಾತು ಹೇಳುತ್ತಿದ್ದರು? ಕಾಂಗ್ರೆಸ್ ಪಕ್ಷ ಸುಳ್ಳು ಹೇಳುವುದರಲ್ಲಿ ನಿಸ್ಸಿಮ. ಈ ಕಾಂಗ್ರೆಸ್ ಪಕ್ಷಕ್ಕೆ ಸುಳ್ಳು ಹೇಳುವುದು ಡಿಎನ್ಎಎನಲ್ಲೇ ಇದೆ ಎಂದರು.
ಮಹಾದಾಯಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಮೋದಿ ಸರ್ಕಾರ ನಮ್ಮ ರಾಜ್ಯಕ್ಕೆ ಮತ್ತೊಂದು ಕೊಡುಗೆ ಕೊಟ್ಟಿದೆ. ಈ ಹಿಂದೆ ಕರ್ನಾಟಕಕ್ಕೆ ಒಂದು ಹನಿ ನೀರು ಕೊಡೋದಿಲ್ಲ ಎಂದು ಕಾಂಗ್ರೆಸ್ನವರು ಹೇಳಿದ್ರು. ಇನ್ನು ಸ್ವಲ್ಪ ದಿನದಲ್ಲೇ ನೀರು ಹಂಚಿಕೆ ಆಗುತ್ತೆ ಅನ್ನೋದು ಖುಷಿಯ ವಿಚಾರ. ಹೀಗಾಗಿ ಪ್ರಧಾನಿಗಳಿಗೆ ನಾನು ಧನ್ಯವಾದ . ಮಾರ್ಚ್ 11 ರಂದು ಧಾರವಾಡದ ಐಐಟಿ ಕಟ್ಟಡ ಉದ್ಘಾಟನೆಯಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರೇ ಧಾರವಾಡಕ್ಕೆ ಬಂದು ಅದನ್ನು ಉದ್ಘಾಟಿಸಲಿದ್ದಾರೆ. ಇದೇ ವೇಳೆ ಮೋದಿ ಅವರು ಹಲವು ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಎಂದರು.
ಯಡಿಯೂರಪ್ಪ ನಮ್ಮ ಹಿರಿಯ ನಾಯಕ ಹಾಗೂ ಜನಪ್ರಿಯ ನಾಯಕರು. ಅವರು ಸೇವೆಯನ್ನು ಯಾವತ್ತೂ ಪಕ್ಷಕ್ಕೆ ನೀಡುತ್ತೇನೆ ಎಂದಿದ್ದಾರೆ. ಅವರನ್ನು ನಮ್ಮ ಪಕ್ಷ ಉಪಯೋಗ ಮಾಡಿಕೊಳ್ಳುತ್ತದೆ. ಅವರಿಗೆ ದೇವರು ಹೆಚ್ಚಿನ ಶಕ್ತಿ ಕೊಡಲಿ. ಅವರ ಜನಪ್ರಿಯತೆಯನ್ನು ನಾವು ಬಳಸಿಕೊಳ್ಳುತ್ತೇವೆ ಎಂದರು.