ಧಾರವಾಡ: ಧಾರವಾಡ ಜಿಲ್ಲೆಯ ನವಲಗುಂದ ತಾಲೂಕ ನಾಗನೂರ ಗ್ರಾಮದ ನಿವಾಸಿ ಅಶೋಕ ಕರಮಳ್ಳಿ ಎಂಬುವವರು ಸ್ಥಳೀಯ ಶ್ರೀ ಕುಮಾರೇಶ್ವರ ಗೃಹನಿರ್ಮಾಣ ಅಭಿವೃದ್ಧಿ ಸಹಕಾರಿ ಸಂಘದವರು ಪರಿಚಯಿಸಿದ ಬೆಂಗಳೂರಿನ ಕರ್ನಾಟಕ ರಾಜ್ಯ ಕೋ ಆಫ್ರೇಟಿವ್ ಹೌಸಿಂಗ್ ಫೆಡರೇಷನ್ ಲಿಮಿಟೆಡ್ ಇವರಲ್ಲಿ 40×60 ಅಳತೆಯ ಸೈಟಿಗೆ 2012ರಲ್ಲಿ ಅರ್ಜಿ ಸಲ್ಲಿಸಿದ್ದರು.
ಅವರು ಮುಂಗಡ ಹಣ ಅಂತಾ ರೂ.9,02,000/-ಗಳನ್ನು ಎದುರುದಾರ ಹೌಸಿಂಗ್ ಫೆಡರೇಷನ್ಗೆ ಸಂದಾಯ ಮಾಡಿದ್ದರು. ಸೈಟಿನ ಬೆಲೆ ಹೆಚ್ಚಾಗಿದ್ದರಿಂದ ದೂರುದಾರ ತನ್ನ ಇಚ್ಚೆಯನ್ನು ಬದಲಿಸಿ 30×50 ಅಳತೆಯ ಸೈಟಿಗೆ ಅರ್ಜಿ ಸಲ್ಲಿಸಿದ್ದರು. ಫಿರ್ಯಾದಿದಾರ ಸೈಟಿನ ಎಲ್ಲ ಹಣವನ್ನು ಕೊಟ್ಟಿದ್ದರೂ ಸಹ ಕ್ರಯ ಪತ್ರ ಮಾಡಿಕೊಡದೇ ನಾನಾ ರೀತಿಯ ಕಾರಣ ಹೇಳಿ ಎದುರುದಾರ ಫೆಡರೇಷನ್ರವರು ಸೈಟಿನ ಖರೀದಿ ಪತ್ರ ಮಾಡಿಕೊಟ್ಟಿರಲಿಲ್ಲ. ಎದುರುದಾರ ಹೌಸಿಂಗ್ ಫೆಡರೇಷನರವರ ಈ ರೀತಿಯ ನಡಾವಳಿಕೆ ಗ್ರಾಹಕರ ಸಂರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರುದಾರ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದಿ:06/03/2023 ರಂದು ದೂರನ್ನು ಸಲ್ಲಿಸಿದ್ದರು. ತಾವು ಫೆಡರೇಷನ್ ಇದ್ದು ತಮ್ಮೊಂದಿಗೆ ದೂರುದಾರ ವ್ಯವಹರಿಸಿದ್ದರೂ ಸಹ ಅವನು ಗ್ರಾಹಕರ ಅರ್ಥ ವಿವರಣೆಯಲ್ಲಿ ಬರುವುದಿಲ್ಲ ಅಂತಾ ಹೇಳಿ ದೂರನ್ನು ವಜಾ ಮಾಡುವಂತೆ ಎದುರುದಾರರು ಕೋರಿಕೊಂಡಿದ್ದರು.
ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ.ಭೂತೆ ಹಾಗೂ ಸದಸ್ಯರುಗಳಾದ ವಿಶಾಲಾಕ್ಷಿ. ಅ. ಬೋಳಶೆಟ್ಟಿ ಮತ್ತು ಪ್ರಭು. ಸಿ. ಹಿರೇಮಠ ಅವರು ದೂರುದಾರರಿಂದ ರೂ.9,02,000/- ಹಣ ಪಡೆದುಕೊಂಡು ಎದುರುದಾರರು ಅವರಿಗೆ ಸೈಟಿನ ಖರೀದಿ ಪತ್ರ ನೋಂದಣಿ ಮಾಡಿಕೊಡಲು ವಿಫಲರಾಗಿರುವುದು ಮತ್ತು ದೂರುದಾರನಿಗೆ ಹಣವನ್ನು ಹಿಂತಿರುಗಿಸದೆ ಇರುವುದು ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಎಂದು ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ.
ದೂರುದಾರರಿಂದ ಹಣ ಪಡೆದು ವ್ಯವಹರಣೆ ನಡೆಸಿರುವುದರಿಂದ ದೂರುದಾರ ಗ್ರಾಹಕರ ಅರ್ಥವಿವರಣೆಯೊಳಗೆ ಬರುತ್ತಾನೆ ಅಂತಾ ಆಯೋಗ ತನ್ನ ತೀರ್ಪಿನಲ್ಲಿ ಹೇಳಿದೆ. ದೂರುದಾರರು ಸಂದಾಯ ಮಾಡಿದ ರೂ.9,02,000/- ಮತ್ತು ಅದರ ಮೇಲೆ ಪೂರ್ತಿ ಹಣ ಸಂದಾಯವಾಗುವವರೆಗೆ ಶೇ.8 ರಂತೆ ವಾರ್ಷಿಕ ಬಡ್ಡಿ ಲೆಕ್ಕ ಹಾಕಿ ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಕೊಡುವಂತೆ ಆಯೋಗ ಎದುರುದಾರರಿಗೆ ಆದೇಶಿಸಿದೆ. ದೂರುದಾರರಿಗೆ ಆಗಿರುವ ಅನಾನುಕೂಲತೆ ಮತ್ತು ಮಾನಸಿಕ ಹಿಂಸೆಗಾಗಿ ರೂ.1 ಲಕ್ಷ ಪರಿಹಾರ ಹಾಗೂ ಈ ಪ್ರಕರಣದ ಖರ್ಚು ವೆಚ್ಚ ಅಂತಾ ರೂ.10,000/- ನೀಡುವಂತೆ ಎದುರುದಾರ ಕರ್ನಾಟಕ ರಾಜ್ಯ ಕೋ ಆಫ್ರೇಟಿವ್ ಹೌಸಿಂಗ್ ಫೆಡರೇಷನ್ಗೆ ಆಯೋಗ ತನ್ನ ತೀರ್ಪಿನಲ್ಲಿ ಆದೇಶಿಸಿದೆ.