ಹುಬ್ಬಳ್ಳಿ: ಹಿಂದುಳಿದ ವರ್ಗಗಳ ನಾಯಕರೆಂದು ಕರೆಯಿಸಿಕೊಳ್ಳುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಸಿದ್ದವಾಗಿದ್ದ ಹಿಂದುಳಿದ ವರ್ಗಗಳ ಜಾತಿ ಗಣತಿ ವರದಿ ಬಿಡುಗಡೆ ಮಾಡಲು ಹಿಂದೇಟು ಹಾಕಿ ಇದೀಗ ಬಿಜೆಪಿ ಸರಕಾರದ ಮೇಲೆ ಒತ್ತಡ ಹಾಕುವ ಕೆಲಸ ಮಾಡುತ್ತಿದ್ದು, ತಮ್ಮ ಅವಧಿಯಲ್ಲಿ ಯಾಕೆ ಬಿಡುಗಡೆ ಮಾಡಲಿಲ್ಲ. ಇದೀಗ ಬಿಡುಗಡೆ ಮಾಡಬೇಕೋ ಬೇಡವೋ ಎನ್ನುವುದು ಸರಕಾರಕ್ಕೆ ಬಿಟ್ಟ ವಿಚಾರ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘2013ರಲ್ಲಿ ಹಿಂದುಗಳಿದ ವರ್ಗಗಳ ಜಾತಿಗಣತಿಗೆ ಆದೇಶಿಸಿದರು. 1931ರ ನಂತರ ಮೊದಲ ಬಾರಿಗೆ ಜಾತಿ ಗಣತಿ ಎಂದು ಬಿಂಬಿಸಿಕೊಂಡಿದ್ದರು. 2015 ರಲ್ಲಿ ವರದಿ ಸಿದ್ದವಾಯಿತು. ಆದರೆ ಆಯೋಗದಿಂದ ವರದಿಯನ್ನು ಸರಕಾರ ಪಡೆಯಲಿಲ್ಲ. ಬಿಡುಗಡೆಗೆ ತಮ್ಮ ಪಕ್ಷದಲ್ಲಿ ಸಾಕಷ್ಟು ವಿರೋಧಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಬಿಡುಗಡೆ ಮಾಡಲಿಲ್ಲ. ಹಿಂದೆ ಸಮ್ಮಿಶ್ರ ಸರಕಾರದ ಸಂದರ್ಭದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಒತ್ತಾಯ ಮಾಡಲಿಲ್ಲ. ಇದೀಗ ಟ್ವೀಟ್ಗಳ ಮೂಲಕ ಹಿಂದುಗಳಿದ ವರ್ಗಗಳ ಬಗ್ಗೆ ಡೋಂಗಿ ಕಾಳಜಿ ತೋರುತ್ತಿದ್ದಾರೆ. ಅಲ್ಲದೆ ಮುಖ್ಯಮಂತ್ರಿ ಚಂದ್ರು ಅವರ ಮೂಲಕ ಪಿಐಎಲ್ ಹಾಕಿಸಿದ್ದು, ಅದರಲ್ಲಿ 2015 ರಲ್ಲಿ ಪೂರ್ಣಗೊಂಡ ವರದಿ ಬಿಡುಗಡೆ ಆದೇಶ ಮಾಡುವಂತೆ ಕೋರ್ಟ್ನ್ನು ಕೋರಿದ್ದಾರೆ. ಸುಳ್ಳುಗಳನ್ನು ಹೇಳುವುದರಲ್ಲಿ ಸಿದ್ದರಾಮಯ್ಯ ನಿಸ್ಸೀಮರಾಗಿದ್ದಾರೆ’ಎಂದರು.