ಹುಬ್ಬಳ್ಳಿ: ಬಿಎಂಟಿಸಿಗೆ ಹೆಚ್ಚಿನ ಅನುದಾನ, ಇತರೆ ಸಾರಿಗೆ ಸಂಸ್ಥೆಗಳಿಗೆ ಕೊಟ್ಟಿಲ್ಲ ಎನ್ನುವ ತಾರತಮ್ಯ ಮಾಡಿಲ್ಲ. ಎಲ್ಲಾ ಸಂಸ್ಥೆಗಳಿಗೆ ನೀಡಿದ ಅನುದಾನದ ಪಟ್ಟಿಯನ್ನು ನೀಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರಿಗೆ ಸಂಸ್ಥೆಗಳ ಸುಧಾರಣೆಗೆ ಮುಂದಾಗಿರುವಂತೆ ಎಸ್ಕಾಂಗಳ ಬಗ್ಗೆಯೂ ಕಾಳಜಿ ವಹಿಸಲಾಗಿದೆ. ಎಲ್ಲಾ ಸಂಸ್ಥೆಗಳ ಸುಧಾರಣೆಗೆ ನಿವೃತ್ತ ಐಎಎಸ್ ಅಧಿಕಾರಿ ಶ್ರೀನಿವಾಸಮೂರ್ತಿ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಆರ್ಥಿಕತೆ ಸ್ವಾವಲಂಬನೆ, ಸೋರಿಕೆ ತಡೆಯುವುದಕ್ಕೆ ಮೊದಲ ಆದ್ಯತೆ ನೀಡಲಾಗುವುದು. ಕೆ.ಎಸ್.ಆರ್.ಟಿ.ಸಿ, ಬಿಎಂಟಿಸಿ, ವಾಕರಸಾಸಂ, ಕಕರಸಾಸಂ ನಿಗಮಗಳ ಅಭಿವೃದ್ಧಿಗಾಗಿ ಈಗಾಗಲೇ 15 ಕ್ಕೂ ಹೆಚ್ಚು ಸಭೆ ಮಾಡಿದ್ದಾರೆ. ಮಧ್ಯಂತರವಾಗಿ ನನ್ನನ್ನು ಭೇಟಿಯಾಗಿ ಒಂದಿಷ್ಟು ಸುಧಾರಣೆ ಕ್ರಮಗಳನ್ನು ಹೇಳಿದ್ದಾರೆ ಎಂದರು.
ಸಾರಿಗೆ ಸಂಸ್ಥೆಗಳ ಸುಧಾರಣೆಗೆ ಮುಂದಾಗಿರುವಂತೆ ಎಸ್ಕಾಂಗಳ ಬಗ್ಗೆಯೂ ಕಾಳಜಿ ವಹಿಸಲಾಗಿದೆ. ಎರಡರ ವಿನ್ಯಾಸ ಬದಲಾಯಿಸಿ ಆರ್ಥಿಕವಾಗಿ ಶಕ್ತಿ ತುಂಬುವ ಕೆಲಸ ಆಗಲಿದೆ. ಆ ನಿಟ್ಟಿನಲ್ಲಿ ಎರಡು ಸಮಿತಿಗಳು ಕಾರ್ಯಪ್ರವೃತ್ತವಾಗಿವೆ. ಆ ಶಿಫಾರಸ್ಸಿನ ಅನ್ವಯ ಎರಡು ಕ್ಷೇತ್ರಗಳ ಸುಧಾರಣೆಗೆ ಅಗತ್ಯಕ್ರಮವಹಿಸಲು ಸರಕಾರ ಬದ್ಧವಾಗಿದೆ ಎಂದು ತಿಳಿಸಿದರು.