ಹುಬ್ಬಳ್ಳಿ : ನಗರದ ಹೊರವಲಯದ ಬೆಂಗಳೂರು- ಪುಣೆ ರಾಷ್ಟ್ರೀಯ ಹೆದ್ದಾರಿಯ ಬುಡರಸಿಂಗಿ ಕ್ರಾಸ್ ರಸ್ತೆ ಬದಿ ನಿಂತಿದ್ದ ಟ್ರ್ಯಾಕ್ಟರ್ಗೆ ಟ್ಯಾಂಕರ್ ಲಾರಿ ಡಿಕ್ಕಿ ಹೊಡೆದಿದ್ದರಿಂದ ಇಬ್ಬರು ಮೃತಪಟ್ಟಿದ್ದಾರೆ.
ಉತ್ತರಕನ್ನಡ ಜಿಲ್ಲೆಯ ಮುಂಡಗೋಡ ತಾಲ್ಲೂಕಿನ ಹುನಗುಂದ ಗ್ರಾಮದ ಕಲ್ಮೇಶ ಯಂಕಮ್ಮನವರ (26) ಹಾಗೂ ಹಾವೇರಿ ಜಿಲ್ಲೆ ಶಿಗ್ಗಾವಿ ತಾಲ್ಲೂಕಿನ ಅಡವಿಸೋಮಾಪುರದ ಕಲ್ಮೇಶ ಜಾಧವ (26) ಮೃತರು.
ಘಟನೆಯಲ್ಲಿ ಮುಂಡಗೋಡದ ಚಿಗಳ್ಳಿಯ ವಿನಾಯಕ ಅರ್ಜುನ ಮಾನಾಬಾಯಿ ಗಾಯಗೊಂಡಿದ್ದಾರೆ. ನ. 2ರಂದು ರಾತ್ರಿ 10.30ರ ಸುಮಾರಿಗೆ ಘಟನೆ ನಡೆದಿದ್ದು, ಆರೋಪಿ ಟ್ಯಾಂಕರ್ ಚಾಲಕ ಮಹಾರಾಷ್ಟ್ರದ ಬಾವುಸಾಹೇಬ ಅಶೋಕ ಡಾಕನೆಯನ್ನು ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮೃತರಿಬ್ಬರು ಹಾಗೂ ಗಾಯಾಳು ವಿನಾಯಕ ರಸ್ತೆ ಬದಿ ಟ್ರಾಕ್ಟರ್ ನಿಲ್ಲಿಸಿಕೊಂಡು, ಟ್ರೇಲರ್ಗೆ ಜಾಕ್ ಹಾಕುತ್ತಿದ್ದರು. ಆಗ ಹಾವೇರಿ ಕಡೆಯಿಂದ ವೇಗವಾಗಿ ಬಂದ ಟ್ಯಾಂಕರ್ ಚಾಲಕ ಬಾವುಸಾಹೇಬ, ಹಿಂದಿನಿಂದ ಟ್ರೇಲರ್ಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ರಭಸಕ್ಕೆ ಇಬ್ಬರೂ ಸ್ಥಳದಲ್ಲೇ ಮೃತಪಟ್ಟರು. ವಿನಾಯಕ ಹಾಗೂ ಟ್ಯಾಂಕರ್ ಚಾಲಕ ವಿನಾಯಕ ಗಾಯಗೊಂಡರು ಎಂದು ಪೊಲೀಸರು ತಿಳಿಸಿದ್ದಾರೆ.