ಧಾರವಾಡ : ಬಹುತೇಕ ಕಳ್ಳರು ಪೊಲೀಸ್ ಠಾಣೆಯ ಸಮೀಪ ಕಳ್ಳತನಕ್ಕೆ ಇಳಿಯೋದಿಲ್ಲ. ಆದರ ಹೊರತಾಗಿ ಬೇರೆ ಬೇರೆ ಜಾಗಗಳಲ್ಲಿ ಕದ್ದು, ಪರಾರಿಯಾಗೋದು ಸಾಮಾನ್ಯ. ಆದ್ರೇ ಈ ಕಳ್ಳ ಮಾತ್ರ ಠಾಣೆಯಲ್ಲಿದ್ದಂತ ಪೊಲೀಸರ ಕಾರನ್ನೇ ಕದ್ದಿದ್ದಾನೆ. ರಾಜಾರೋಷವಾಗಿ ತಾನು ಕದ್ದಂತ ಪೊಲೀಸ್ ಕಾರನ್ನು ಓಡಿಸಿಕೊಂಡು ಹೋಗಿದ್ದಾನೆ.
ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದ ಪೊಲೀಸ್ ಠಾಣೆಯ ಮುಂದೆ ನಿಲ್ಲಿಸಿದ್ದಂತ ಪೊಲೀಸರ ಬುಲೆರೋ ಕಾರು ಕದಿಯೋದಕ್ಕೆ ಪ್ಲಾನ್ ಮಾಡಿದ್ದಂತ ಕದೀಮ ಕಳ್ಳ ನಾಗಪ್ಪ, ಅದರಂತೆ ನಿನ್ನೆ ಬೆಳಗಿನ ಜಾವ 4 ಗಂಟೆಗೆ ಕದ್ದಿದ್ದಾನೆ. ಅಲ್ಲಿಂದ ಹಾವೇರಿ ಜಿಲ್ಲೆಯ ಬ್ಯಾಡಗಿಯವರೆಗೆ ಬೆಳಗಾಗೋದ್ರಲ್ಲಿ ಚಲಾಯಿಸಿಕೊಂಡು ಹೋಗಿದ್ದಾನೆ.
ಬೆಳಿಗ್ಗೆ ಪೊಲೀಸ್ ಠಾಣೆ ಆವರಣದ ಮುಂದಿದ್ದಂತ ಬುಲೇರೋ ಕಾರು ಕಾಣದೇ ಇದ್ದಾಗ, ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ಕೂಡಲೇ ಎಲ್ಲಾ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಿದ್ದಾರೆ. ಈ ವಿಷಯ ತಿಳಿದು ಅಲರ್ಟ್ ಆದಂತ ಅಣ್ಣಿಗೇರಿ ಪೊಲೀಸರು ಕಾರು ಚಲಾಯಿಸಿಕೊಂಡು ಹೋಗುತ್ತಿದ್ದಂತ ಕಳ್ಳ ನಾಗಪ್ಪನನ್ನು ಕಾರು ಸಮೇತ ಹಿಡಿದಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಜೈಲಿಗಟ್ಟಿದ್ದಾರೆ.