ಧಾರವಾಡ, ಜ. 04 : ಧಾರವಾಡ ಜಿಲ್ಲೆಯಲ್ಲಿ ಎರಡು ಓಮಿಕ್ರಾನ್ ಪ್ರಕರಣಗಳು ದೃಢಪಟ್ಟಿವೆ. ಸೋಂಕಿತರಿಗೆ ಹೋಂ ಐಸೋಲೇಷ್ನ್ದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಆರೋಗ್ಯದ ಬಗ್ಗೆ ನಿಗಾ ವಹಿಸಲಾಗಿದೆ.
ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಈ ಕುರಿತು ಮಾಹಿತಿ ನೀಡಿದರು, “ಸೋಂಕಿತ 53 ವರ್ಷದ ಮಹಿಳೆ ಹಾಗೂ 14 ವರ್ಷದ ಬಾಲಕಿಗೆ ಈಗಾಗಲೇ ಅಗತ್ಯ ಚಿಕಿತ್ಸೆ ನೀಡಿ ಆರೋಗ್ಯದ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ” ಎಂದರು.
ಹುಬ್ಬಳ್ಳಿ ನಿವಾಸಿಗಳಾದ 53 ವರ್ಷದ ಮಹಿಳೆ ಮತ್ತು 14 ವರ್ಷದ ಬಾಲಕಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದರಿಂದ ಅಗತ್ಯ ಚಿಕಿತ್ಸೆ ನೀಡಿ ಅವರ ಸಂಪರ್ಕಕ್ಕೆ ಬಂದಿದ್ದ ಸುಮಾರು 395 ಜನರಿಗೆ ಕೋವಿಡ್ ಪರೀಕ್ಷೆ ಮಾಡಲಾಗಿತ್ತು.
ಅವರೆಲ್ಲರ ವರದಿ ನೆಗೆಟಿವ್ ಬಂದಿದ್ದರಿಂದ ಇವರಿಬ್ಬರಿಗೆ ಮಾತ್ರ ಅಗತ್ಯ ಚಿಕಿತ್ಸೆ ನೀಡಿ ಹೋಂ ಐಸೋಲೇಷನ್ ಮಾಡಲಾಗಿದೆ. ಈಗ ಓಮಿಕ್ರಾನ್ ದೃಢವಾಗಿರುವುದರಿಂದ ಇನ್ನೊಂದು ಬಾರಿ ಎಲ್ಲ 395 ಜನರಿಗೂ ಕೋವಿಡ್ ಟೆಸ್ಟ್ ಮಾಡಲು ಕ್ರಮ ಕೈಗೊಳ್ಳಲಾಗಿದೆ.
ಸೋಂಕಿತ ಮಹಿಳೆ ಹಾಗೂ ಬಾಲಕಿಯ ವರದಿ ನೆಗೆಟಿವ್ ಬರುವವರೆಗೆ ಹೋಂ ಐಸೋಲೇಷನ್ನಲ್ಲಿ ಇರಲಿದ್ದಾರೆ. ಅವರ ಆರೋಗ್ಯದ ಬಗ್ಗೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಂದ ನಿಗಾ ವಹಿಸಲಾಗುತ್ತದೆ.
“ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಧಾರವಾಡದಲ್ಲಿಯೂ ಸೋಂಕು ನಿಧಾನಗತಿಯಲ್ಲಿ ಜಾಸ್ತಿ ಆಗುತ್ತಿದೆ. ಯಾರೂ ಭಯ ಪಡಬಾರದು. ಕೋವಿಡ್ ನಿಯಂತ್ರಣದ ಮುಂಜಾಗೃತೆಗಾಗಿ ತಪ್ಪದೇ ಎಲ್ಲರೂ ಮಾಸ್ಕ್ ಧರಿಸಬೇಕು ಮತ್ತು ಸ್ಯಾನಿಟೈಸರ್ ಬಳಸಬೇಕು” ಎಂದು ಜಿಲ್ಲಾಧಿಕಾರಿಗಳು ಕರೆ ನೀಡಿದ್ದಾರೆ.
ಧಾರವಾಡ ಜಿಲ್ಲೆಯಲ್ಲಿ ಕೋವಿಡ್ ಸಕ್ರಿಯ ಪ್ರಕರಣಗಳು 62. 9 ಜನ ಆಸ್ಪತ್ರೆಯಲ್ಲಿ ಇದ್ದಾರೆ. 53 ಜನ ಹೋಮ್ ಐಸೋಲೇಷನ್ನಲ್ಲಿದ್ದಾರೆ. ಮುಂಬರುವ ಎರಡು ತಿಂಗಳು ಎಲ್ಲರೂ ಕೋವಿಡ್ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಎಂದು ಮನವಿ ಮಾಡಿದ್ದಾರೆ.
ತಮಗೋಸ್ಕರ ತಮ್ಮ ಕುಟುಬಂದವರಿಗೋಸ್ಕರ ಸುರಕ್ಷಿತ ಕ್ರಮಗಳನ್ನು ಅನುಸರಿಸಬೇಕು. ಜಿಲ್ಲಾಡಳಿತ ಕೋವಿಡ್ ನಿಯಂತ್ರಣಕ್ಕಾಗಿ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಸಾರ್ವಜನಿಕರು ಸಹಕಾರ ನೀಡಬೇಕೆಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.
ಲಸಿಕೆ ಪಡೆದ ಮಕ್ಕಳು ಧಾರವಾಡ ಜಿಲ್ಲೆಯಲ್ಲಿಯೂ 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡುವ ಅಭಿಯಾನ ಆರಂಭವಾಗಿದೆ. ಅಭಿಯಾನಕ್ಕೆ ಉತ್ತಮ ಸ್ಪಂದನೆ ಸಿಕ್ಕಿದ್ದು, ಮಕ್ಕಳು ಆತ್ಮವಿಶ್ವಾಸದಿಂದ ಬಂದು ಲಸಿಕೆ ಪಡೆದಿದ್ದಾರೆ.
ಜಿಲ್ಲಾಧಿಕಾರಿಗಳು ಈ ಕುರಿತು ಪ್ರಕಟಣೆ ಹೊರಡಿಸಿದ್ದಾರೆ. ಸೋಮವಾರ ಶಾಲಾ ಅವಧಿ ಮುಗಿಯುವವರೆಗೆ ಸಾವಿರಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಲಸಿಕೆ ಪಡೆದಿದ್ದಾರೆ. ಲಸಿಕೆ ಪಡೆದವರ ವಿವರವನ್ನು ಪೋರ್ಟಲ್ನಲ್ಲಿ ದಾಖಲು ಮಾಡಲಾಗುತ್ತಿದೆ. ಸಂಜೆ 4.30 ರವರೆಗೆ 11,815 ವಿದ್ಯಾರ್ಥಿಗಳ ವಿವರ ದಾಖಲಾಗಿದೆ ಎಂದು ತಿಳಿಸಿದ್ದಾರೆ.
ಲಸಿಕೆ ಪಡೆದಿರುವ ವಿದ್ಯಾರ್ಥಿಗಳ ವಿವರಗಳನ್ನು ಪೋರ್ಟ್ಲ್ನಲ್ಲಿ ದಾಖಲಿಸುವ ಕಾರ್ಯ ಇನ್ನು ಪ್ರಗತಿಯಲ್ಲಿದೆ. ಮಕ್ಕಳ ಲಸಿಕಾಕರಣ ಗುರಿ ಸಾಧಿಸುವವರೆಗೆ ಪ್ರತಿದಿನ ವಿವಿಧ ಶಾಲಾ ಕಾಲೇಜುಗಳಲ್ಲಿ ಲಸಿಕಾಕರಣ ಮುಂದುವರಿಯುತ್ತದೆ ಎಂದು ಹೇಳಿದ್ದಾರೆ.
ಲಸಿಕೆ ಸುರಕ್ಷಿತವಾಗಿದೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮಾತನಾಡಿ, “ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ಎಲ್ಲ ರೀತಿಯ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದೆ. ಈಗಾಗಲೇ ನಿಮ್ಮ ಪಾಲಕರಿಗೆ ಲಸಿಕೆ ನೀಡಲಾಗಿದ್ದು, ವಿದ್ಯಾರ್ಥಿಗಳು ಸಹ ತಪ್ಪದೇ ಎರಡು ಡೋಸ್ ಲಸಿಕೆ ಪಡೆದುಕೊಳ್ಳಬೇಕು” ಎಂದು ಕರೆ ನೀಡಿದರು.
“ಲಸಿಕೆ ಪಡೆಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಹಾಗೂ ಆಕಸ್ಮಿಕವಾಗಿ ಕೋವಿಡ್ ಸೋಂಕು ತಗುಲಿದರೂ ಯಾವುದೇ ಗಂಭೀರತೆ ಉಂಟಾಗದಂತೆ ಲಸಿಕೆ ರಕ್ಷಿಸುತ್ತದೆ. ಆದ್ದರಿಂದ 2007 ಮತ್ತು 2007 ರ ಪೂರ್ವದಲ್ಲಿ ಜನಿಸಿರುವ ಎಲ್ಲರೂ ತಪ್ಪದೇ ಲಸಿಕೆಯನ್ನು ಪಡೆದುಕೊಳ್ಳಬೇಕು. ಜಿಲ್ಲೆಯ 95,774 ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ” ಎಂದು ಹೇಳಿದ್ದಾರೆ.