ಬೆಳಗಾವಿ: ಸುವರ್ಣ ವಿಧಾನಸೌಧದಲ್ಲಿ ನಾಳೆಯಿಂದ 10 ದಿನಗಳ ಕಾಲ ಚಳಿಗಾಲದ ಅಧಿವೇಶನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಸ್ಪೀಕರ್ ಯುಟಿ ಖಾದರ್ ಹಾಗೂ ಬಸವರಾಜ ಹೊರಟ್ಟಿ ಮಾತನಾಡಿದ್ದಾರೆ. ಡಿಸೆಂಬರ್ 4 ರಿಂದ 15ರ ವರೆಗೆ ಚಳಿಗಾಲದ ಅಧಿವೇಶನ ನಿಗಧಿಯಾಗಿದೆ ಎಂದು ಹೇಳಿದ್ದಾರೆ.
ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಕಲಾಪದಲ್ಲಿ ಒಟ್ಟು 3 ಬಿಲ್ಗಳ ಬಗ್ಗೆ ಚರ್ಚೆ ಆಗಲಿವೆ. ಉತ್ತರ ಕರ್ನಾಟಕದ ಮಹಾದಾಯಿ, ಕೃಷ್ಣಾ, ಬರಗಾಲ ಸೇರಿ ಹಲವು ವಿಷಯ ಕುರಿತು ಅಧಿವೇಶನದಲ್ಲಿ ಸುದೀರ್ಘ ಚರ್ಚೆ ನಡೆಯಲ್ಲಿದೆ. ಬೆಳಗಾವಿ ಅಧಿವೇಶನ ಅಂದ್ರೆ ಪ್ರತಿಭಟನೆ ಎನ್ನುವುದನ್ನ ಹೋಗಲಾಡಿಸಲು ಈ ಚರ್ಚೆ ನಡೆಯಲ್ಲಿದೆ ಎಂದರು.
ಇನ್ನು ಡಿಸೆಂಬರ್ 4 ರಿಂದ 15ರ ವರೆಗೆ ಚಳಿಗಾಲದ ಅಧಿವೇಶನ ನಿಗಧಿಯಾಗಿದೆ. ಅಧಿವೇಶನದಲ್ಲಿ ಭಾಗಿಯಾಗುವ ಸಚಿವರಿಗೆ, ಶಾಸಕರಿಗೆ, ಅಧಿಕಾರಿಗಳಿಗೆ ಊಟ, ವಸತಿ ವ್ಯವಸ್ಥೆ ಮಾಡಲಾಗಿದೆ. ಅಧಿವೇಶನ ನಡೆಯುವಾಗ ಹೊರಗೆ ಯಾವುದೇ ತೊಂದರೆಯಾಗದಂತೆ ವ್ಯವಸ್ಥೆ ಮಾಡಲಾಗಿದೆ. ಸುವರ್ಣ ಸೌಧಕ್ಕೆ ವರ್ಷವಿಡಿ ಲೈಟಿಂಗ್ ವ್ಯವಸ್ಥೆ ಮಾಡಿ ಅಲಂಕರಿಸಲಾಗಿದೆ ಎಂದು ಹೇಳಿದರು.
ಕಲಾಪ ವೀಕ್ಷಣೆಗೆ ಆಗಮಿಸುವ ಶಾಲಾ ಮಕ್ಕಳಿಗೆ ಸಮಸ್ಯೆಯಾಗದಂತೆ, ಬಿಸಿನಲ್ಲಿ ನಿಲ್ಲದಂತೆ ವ್ಯವಸ್ಥೆ ಮಾಡಲಾಗಿದೆ. ಈ ವೇಳೆ ಮಕ್ಕಳಿಗೆ ತಂಪು ಪಾನೀಯ ನೀಡಲು ನಿರ್ಧರಿಸಿದ್ದೇವೆ. ಮಕ್ಕಳು ಅರ್ಧಗಂಟೆ ಕಲಾಪವನ್ನು ನೋಡಬಹುದಾಗಿದೆ. ಡಿಸೆಂಬರ್ 12ರಂದು ಸುವರ್ಣ ಸೌಧದಲ್ಲಿ ಸುವರ್ಣ ಸಂಭ್ರಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಧಿವೇಶನಕ್ಕೆ ಮೊದಲು ಹಾಜರಾಗುವ ಶಾಸಕರಿಗೆ ಬಹುಮಾನ ವಿರತಣೆ ಮಾಡಲು ತೀರ್ಮಾನ ಮಾಡಿದ್ದೇವೆ. ಹೀಗಾಗಿ ಅಶೋಕ ಚಕ್ರ ಇರುವ ಚಹಾ ಕಪ್ ಬಹುಮಾನವಾಗಿ ನೀಡಲಾಗುವುದು ಎಂದು ಹೇಳಿದ್ದಾರೆ.