ಬೆಳಗಾವಿ: ವಂಚನೆ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದ್ದು, ಇದೀಗ ಹೊಸದೊಂದು ಪ್ರಕರಣ ಬೆಳಕಿಗೆ ಬಂದಿದೆ. ಸಚಿವ ಸತೀಶ್ ಜಾರಕಿಹೊಳಿ ಆಪ್ತನಿಗೆ ಹಣ ಡಬಲ್ ಮಾಡಿ ಕೊಡುವುದಾಗಿ 25 ಲಕ್ಷ ರೂ. ವಂಚನೆ ಮಾಡಿ ಪರಾರಿಯಾಗಿದ್ದರು, ಇದೀಗ ವಂಚಿಸಿದ 7 ಆರೋಪಿಗಳನ್ನು ಕಾಕತಿ ಪೊಲೀಸರು ಬಂಧಿಸಿದ್ದಾರೆ.
ಸಚಿವ ಸತೀಶ್ ಜಾರಕಿಹೊಳಿ ಆಪ್ತ ಸಿದ್ಧನಗೌಡ ಬಿರಾದಾರ್ ಅವರಿಗೆ ಕೊಲ್ಹಾಪುರದಿಂದ ವಾಪಸ್ ಬೆಳಗಾವಿಗೆ ಬರುವಾಗ ಬಸ್ನಲ್ಲಿ ಈ ವಂಚಕರ ಪರಿಚಯವಾಗಿರುತ್ತದೆ. ಈ ವೇಳೆ ಆರೋಪಿ ಜಾಹ್ನವಿ ಸಿದ್ಧನಗೌಡರ ನಂಬರ್ ಪಡೆದುಕೊಂಡಿದ್ದಳು. ನಂತರ ಹಣ ಕೊಟ್ಟರೆ ಡಬಲ್ ಮಾಡಿಕೊಡ್ತಿವಿ ಎಂದು ಸಿದ್ಧನಗೌಡ ಮುಂದೆ ಜಾಹ್ನವಿ ಕತೆ ಹೇಳಿದ್ದಾಳೆ. ಇದನ್ನ ನಂಬಿದ ಸಿದ್ಧನಗೌಡ ನವೆಂಬರ್ ತಿಂಗಳಿನಲ್ಲಿ 25 ಲಕ್ಷ ರೂ. ಹಣವನ್ನು ತೆಗೆದುಕೊಟ್ಟಿದ್ದಾರೆ.
ಕಾಕತಿ ಠಾಣಾ ವ್ಯಾಪ್ತಿಯ ಹೋಟೆಲ್ ಒಂದಕ್ಕೆ ಹೋಗಿದ್ದಾರೆ. ಈ ವೇಳೆ ಆರೋಪಿಗಳು, ಪೊಲೀಸರಂತೆ ರೈಡ್ ಮಾಡಿ ಹಣ ಪಡೆದು ಪರಾರಿಯಾಗಿದ್ದರು.
ಈ ವೇಳೆ ಸಿದ್ಧನಗೌಡ ಕಾಕತಿ ಪೊಲೀಸ್ ಠಾಣೆಗೆ ಹೋಗಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಅಂತಹ ಪೊಲೀಸರು ಇಲ್ಲಿ ಯಾರೂ ಇಲ್ಲ. ಅಂತಹ ಪ್ರಕರಣ ದಾಖಲಾಗಿಲ್ಲ ಎಂದಿದ್ದಾರೆ.
ವಂಚನೆಗೊಳಗಾದ ಸಿದ್ಧನಗೌಡ ಅವರು ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಹೋಟೆಲ್ನ ಸಿಸಿಟಿವಿ ದೃಶ್ಯಾವಳಿ ಆಧರಿಸಿ ವಂಚಕರನ್ನು ಬಂಧಿಸಲಾಗಿದ್ದು, ಆರೋಪಿಗಳಿಂದ 6 ಲಕ್ಷ ರೂ. ವಸೂಲಿ ಮಾಡಿದ್ದಾರೆ.