News Karnataka Kannada
Wednesday, May 08 2024
ಬೆಳಗಾವಿ

ರಾಯಚೂರು, ಧಾರವಾಡದಲ್ಲಿ ಏಮ್ಸ್ ಸ್ಥಾಪನೆಗೆ ಕೇಂದ್ರಕ್ಕೆ ಶಿಫಾರಸ್ಸು: ಸಚಿವ ಮಾಧುಸ್ವಾಮಿ

Madhu Swami
Photo Credit : News Kannada

ಬೆಳಗಾವಿ : ರಾಯಚೂರು ಮತ್ತು ಧಾರವಾಡದಲ್ಲಿ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ(ಏಮ್ಸ್) ಸ್ಥಾಪನೆ ಮಾಡಲು ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ತಿಳಿಸಿದರು.

ವಿಧಾನಸಭೆಯಲ್ಲಿದ್ದು ರಾಯಚೂರು ಗ್ರಾಮೀಣ ಶಾಸಕ ಬಸವನಗೌಡ ದದ್ದಲ್ ಅವರ ಗಮನಸೆಳೆಯುವ ಪ್ರಶ್ನೆಗೆ ಉತ್ತರಿಸಿದ ಅವರು ರಾಯಚೂರು ಮತ್ತು ಧಾರವಾಡದಲ್ಲಿ ಏಮ್ಸ್ ಸ್ಥಾಪನೆ ಮಾಡುವಂತೆ ಶಿಫಾರಸ್ಸು ಮಾಡಲಾಗಿದೆ;ಆದರೇ ಈ ಬಗ್ಗೆ ಕೇಂದ್ರ ಸರಕಾರವೇ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ ಎಂದು ಅವರು ಹೇಳಿದರು.

ಈ ಹಿಂದೆ ರಾಮನಗರ,ವಿಜಯಪುರ,ಧಾರವಾಡದಲ್ಲಿ ಏಮ್ಸ್ ಸ್ಥಾಪನೆ ಮಾಡುವಂತೆ ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗಿತ್ತು. ರಾಜ್ಯದ ಶಿಫಾರಸ್ಸು ಆಧರಿಸಿ ಕೇಂದ್ರದ ತಂಡ ಈಗಾಗಲೇ ಧಾರವಾಡದ ಇಟಗಟ್ಟ ಗ್ರಾಮದ ಬಳಿ ಗುರುತಿಸಲಾದ ಭೂಮಿ ಪರಿಶೀಲನೆ ಮಾಡಿಕೊಂಡು ಹೋಗಿದೆ ಎಂದು ಅವರು ತಿಳಿಸಿದರು.

ಈ ಮಧ್ಯೆ ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ ಮಾಡಬೇಕು ಎಂಬ ಬೇಡಿಕೆ ಬಂದ ಕಾರಣ ರಾಯಚೂರಿನಲ್ಲಿ ಏಮ್ಸ್ ಮಾದರಿ ಆಸ್ಪತ್ರೆಗೆ 2021 ಏ.9ರಂದು ಪತ್ರ ಬರೆಯಲಾಗಿದೆ. ಹೀಗೆಯೇ ಧಾರವಾಡ ಮತ್ತು ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಗೆ ಬೇಕಾದ ಭೂಮಿ, ನೀರು,ವಿದ್ಯುತ್ ಮತ್ತು ರಸ್ತೆ ಸಂಪರ್ಕ ಇರುವುದಾಗಿ ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗಿದೆ ಎಂದು ಅವರು ತಿಳಿಸಿದರು.
ಏಮ್ಸ್ ಸ್ಥಾಪನೆ ಕುರಿತು ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಕೇಂದ್ರಕ್ಕೆ ಇರುವುದರಿಂದ ಅವರು ರಾಜ್ಯಕ್ಕೆ ಒಂದು ಅಥವಾ ಎರಡು ಏಮ್ಸ್ ನೀಡುವರೋ ಎಂಬುದನ್ನು ನೋಡಬೇಕಿದೆ ಎಂದರು.

ಇದಕ್ಕೂ ಮೊದಲು ಶಾಸಕ ಬಸವನಗೌಡ ದದ್ದಲ್ ಅವರು ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ ಮಾಡುವಂತೆ ಮನವಿ ಮಾಡಿದರು ಹಾಗೂ ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಗೆ ಬೇಕಾದ ಅಗತ್ಯ ಸೌಕರ್ಯಗಳು ಮತ್ತು ಏಮ್ಸ್ ಅಗತ್ಯತೆ ಬಗ್ಗೆ ಸದನಕ್ಕೆ ವಿವರಿಸಿದರು.

ಕುಣಿಗಲ್ ಸ್ಟಡ್ ಫಾರಂ – ಸರ್ಕಾರ, ಶಾಸನಸಭೆ ಒಪ್ಪಿದಂತೆ ತೀರ್ಮಾನ :
ಹೆಸರಾಂತ ಕುಣಿಗಲ್ ‘ಸ್ಟಡ್ ಫಾರಂ’ ನ ಲೀಸ್ ಅವಧಿ ಮುಗಿದಿದ್ದು ಸರ್ಕಾರ ತನ್ನ ಸುಪರ್ದಿಗೆ ತೆಗೆದುಕೊಂಡು ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ಕಾನೂನು ಸಂಸದೀಯ ವ್ಯವಹಾರಗಳ ಸಚಿವರಾದ ಜೆ.ಸಿ.ಮಾಧುಸ್ವಾಮಿ ಹೇಳಿದರು.

ಕುಣಿಗಲ್ ಕ್ಷೇತ್ರದ ಶಾಸಕ ಡಾ.ರಂಗನಾಥ್ ಅವರ ಗಮನ ಸೆಳೆಯುವ ಸೂಚನೆಗೆ ಪ್ರತಿಕ್ರಿಯಿಸಿದ ಸಚಿವರು, ಬೆಂಗಳೂರಿಗೆ ಕೇವಲ 70 ಕಿ.ಮೀ ದೂರದಲ್ಲಿರುವ 400 ಎಕರೆಯ ಇಂತಹ ಜಾಗವನ್ನು ಹೇಗೆ ಬಳಸಿಕೊಳ್ಳಬೇಕೆಂದು ಸರ್ಕಾರ ನಿರ್ಧರಿಸಲಿದೆ.

ಈಗಾಗಲೇ ಮುಖ್ಯಮಂತ್ರಿಗಳು ಈ ಬಗೆಗೆ ಚರ್ಚಿಸಿದ್ದು, ಲೀಸ್ ಅವಧಿಯನ್ನು ಯಾವುದೇ ಕಾರಣಕ್ಕೂ ಮುಂದುವರೆಸುವುದಿಲ್ಲ. ಈ ಸ್ಥಳದಲ್ಲಿ ಯಾವುದಾದರು ಕಾಲೇಜು ಆರಂಭಿಸುವುದೂ ಸೇರಿದಂತೆ ಅಗತ್ಯ ಉದ್ದೇಶಗಳಿಗೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಸ್ಟಡ್ ಫಾರಂ ಕಾರ್ಮಿಕರಿಗೆ ಉಳಿಕೆ ಸಂಬಳ ನೀಡುವುದು ಆ ಸಂಸ್ಥೆಯವರಿಗೆ ಬಿಟ್ಟ ವಿಚಾರ ಎಂದರು.

ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್ ಪ್ರತಿಕ್ರಿಯಿಸಿ,ಡಿಸೆಂಬರ್ ಅಂತ್ಯದವರೆಗೆ ಲೀಸ್ ಅವಧಿಯನ್ನು ಮುಂದುವರೆಸಲಾಗಿದೆ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು