ಬಾಗಲಕೋಟೆ: ಎಲ್ಲ ಸಮುದಾಯದ ಮಕ್ಕಳು ಶೈಕ್ಷಣಿಕ, ರಾಜಕೀಯ, ಸಾಮಾಜಿಕ, ಆರ್ಥಿಕವಾಗಿ ಸಬಲರಾಗಲು ಹಾಗೂ ಸರಕಾರಿ ಉದ್ಯೋಗ ಪಡೆಯಲು ಮೀಸಲಾತಿಗಾಗಿ ಸರಕಾರಗಳ ವಿರುದ್ಧ ಹೋರಾಟ, ಪ್ರತಿಭಟಿಸುವುದು ಅನಿವಾರ್ಯವಾಗಿದೆ ಎಂದು ಬಾಗಲಕೋಟೆ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.
ಭಾನುವಾರ ಜಿಲ್ಲೆಯ ಹುನಗುಂದದ ಬಸವ ಮಂಟಪದಲ್ಲಿ ರಾಜ್ಯ ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಘಟಕ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, ಸರಕಾರ ಈಗಾಗಲೇ ಕೆಲವು ಲಿಂಗಾಯತ ಉಪಜಾತಿಗಳಿಗೆ ಶೈಕ್ಷಣಿಕ ಮೀಸಲಾತಿ ನೀಡಿದೆ. ಅದೇ ರೀತಿ ಉದ್ಯೋಗ ಮೀಸಲಾತಿ ಕೇಳುವುದು ಅನಿವಾರ್ಯವಾಗಿದೆ ಎಂದರು.
ಈ ವಿಚಾರವಾಗಿ ಚುನಾವಣೆ ನಡೆಯುವಾಗ ಪ್ರತಿ ಜಾತಿಯವರು ನಡೆಸುವ ಸಮ್ಮೇಳನದ ಪ್ರಭಾವದಿಂದ ಮತ್ತೊಂದು ಸಣ್ಣ ಸಮಾಜ ಒಡೆದು ಹೋಗುವ ರೀತಿಯಲ್ಲಿ ಹೋರಾಟ ನಡೆಸಬಾರದು ಎಂದರು.