ಬಾಗಲಕೋಟೆ: ಬಣಜಿಗ ಸಮಾಜದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದಾರೆ ಎಂದು ಆರೋಪಿಸಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಹುನಗುಂದ ಮಾಜಿ ಶಾಸಕ ವಿಜಯಾನಂದ ಕಾಶಪ್ಪ ವಿರುದ್ಧ ಪಟ್ಟಣದ ಬಣಜಿಗ ಸಮಾಜ ಬಾಂಧವರು ಬುಧವಾರ ನವೆಂಬರ್ 16 ರಂದು ಬೃಹತ್ ಪ್ರತಿಭಟನೆ ನಡೆಸಿದರು.
ತೋನಪಿನಮಠ ಸಮಾಜದ ಹಿರಿಯರಾದ ಚಂದ್ರು ಗೊಂದಿ, ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ರಾಯ ಮಾತನಾಡಿ, ವಿಜಯಪುರ ಜಿಲ್ಲೆಯ ಹುನಗುಂದ ಮತ್ತು ವಿಧಾನಸಭಾ ಕ್ಷೇತ್ರಗಳ ಮತದಾರರು ಮುಂಬರುವ ಚುನಾವಣೆಯಲ್ಲಿ ಬಣಜಿಗ ಸಮಾಜದ ಆತ್ಮಗೌರವಕ್ಕೆ ಧಕ್ಕೆ ತಂದಿರುವ ಇಬ್ಬರ ವಿರುದ್ಧ ಮತ ಚಲಾಯಿಸುವ ಮೂಲಕ ತಕ್ಕ ಪಾಠ ಕಲಿಸಬೇಕು ಎಂದರು.
ಮುಖಂಡರಾದ ಮಹಾಲಿಂಗಪ್ಪ ಸಿ.ಕುಲ್ಲೊಳ್ಳಿ, ಗಿರೀಶ್ ಮುತ್ತೂರ, ಚನಬಸು ಹುರಕ್ಕಡ್ಲಿ ಮಾತನಾಡಿ, ಬಸವಣ್ಣನವರ ಕಾಯಕ ತತ್ವದಡಿ ಎಲ್ಲ ಸಮುದಾಯದವರೊಂದಿಗೆ ಉತ್ತಮ ಬಾಂಧವ್ಯ ಹೊಂದಿ ಮಾದರಿಯಾಗಿ ಬದುಕುತ್ತಿರುವ ಸಮಾಜ ಬಣಜಿಗ ಸಮಾಜವಾಗಿದೆ. ಬಣಜಿಗ ಸಮಾಜ ಒಗ್ಗಟ್ಟು ಪ್ರದರ್ಶಿಸಿ ಇಂತಹವರಿಗೆ ಸಮಯ ಬಂದಾಗ ತಕ್ಕ ಪಾಠ ಕಲಿಸಬೇಕು ಎಂದರು.