ಬಾಗಲಕೋಟೆ : ಕೃಷ್ಣಾ ಮೇಲ್ದಂಡೆ ಯೋಜನೆಯಿಂದ ಬಾಧಿತರಾದ ಸಂತ್ರಸ್ಥರಿಗೆ ಯುನಿಟ್-2ರಲ್ಲಿ ಬಾಡಿಗೆದಾರರ ಮತ್ತು ಇತರೆ ಸಂತ್ರಸ್ಥರು ಸೇರಿ ಒಟ್ಟು 94 ನಿವೇಶನದ ಹಕ್ಕು ಪತ್ರಗಳನ್ನು ಶಾಸಕ ವೀರಣ್ಣ ಚರಂತಿಮಠ ಗುರುವಾರ ವಿತರಿಸಿದರು.
ಬಾಗಲಕೋಟೆ ಪಟ್ಟಣ ಅಭಿವೃದ್ದಿ ಪ್ರಾಧಿಕಾರದ ಸಭಾಂಗಣದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಸಂತ್ರಸ್ಥರಿಗೆ ಹಕ್ಕುಪತ್ರಗಳನ್ನು ವಿತರಿಸಿ ಮಾತನಾಡಿದ ಅವರು ಬಾಡಿಗೆದಾರರು 32, ಮುಖ್ಯ ಸಂತ್ರಸ್ಥರು 18, ಮುಖ್ಯ ಸಂತ್ರಸ್ಥರ ಮಯಸ್ಕರ ಮಕ್ಕಳಿಗೆ 20, ಅತೀಕ್ರಮಣದಾರರಿಗೆ 20 ವಾಣಿಜ್ಯಕ್ಕೆ 4 ಸೇರಿ ಒಟ್ಟು 94 ಸಂತ್ರಸ್ಥರಿಗೆ ಹಕ್ಕುಪತ್ರ ವಿತರಿಸಲಾಗಿದೆ. ಒಟ್ಟಾರೆಯಾಗಿ ಇಲ್ಲಿಯವರೆಗೆ ಒಟ್ಟು 1529 ಸಂತ್ರಸ್ಥರಿಗೆ ಹಕ್ಕುಪತ್ರ ನೀಡಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಪೂರ್ವದಲ್ಲಿ ನಡೆದ ಬಿಟಿಡಿಎ ಸಭೆಯಲ್ಲಿ ಕಾರ್ಪಸ್ ಫಂಡ್ನಲ್ಲಿ 1.38 ಕೋಟಿ ರೂ.ಗಳಲ್ಲಿ ವಿವಿಧ ಕಾಮಗಾರಿ ತೆಗೆದುಕೊಳ್ಳಲು ತಿರ್ಮಾನಿಸಲಾಗಿದೆ. ಕೆಬಿಜೆಎನ್ಎಲ್ನ 1 ರಿಂದ 26 ವರೆಗೆ ಹೊಸ ಕಾಮಗಾರಿಗಳಿಗೆ 120 ಕೋಟಿ ರೂ.ಗಳ ಕ್ರಿಯಾ ಯೋಜನೆಗೆ ಅನುಮೋದನೆ ದೊರೆತಿದೆ. ವಿಕಲಚೇತನರ ಸಮುದಾಯ ಭವನ ಮತ್ತು ಪಶು ಆಸ್ಪತ್ರೆಯ ಟೆಸ್ಟಿಂಗ್ ಲ್ಯಾಬ್ಗೆ ನಿವೇಶನ ನೀಡಲು ತಿರ್ಮಾನಿಸಲಾಗಿದೆ. ಅದಲ್ಲದೇ ಜಿಲ್ಲಾ ಕುಟುಂಬ ಮತ್ತು ಕಾರ್ಮಿಕ ನ್ಯಾಯಾಲಯಕ್ಕೆ ಹೆಚ್ಚಿನ ನಿವೇಶನ ಕೇಳಿದ್ದರಿಂದ 1 ಎಕರೆ ಬದಲಾಗಿ 3 ಎಕರೆ ಜಾಗ ನೀಡಲು ಸಭೆಯಲ್ಲಿ ತಿರ್ಮಾನಿಸಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಸವಲಿಂಗಪ್ಪ ನಾವಲಗಿ, ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಬಿಟಿಡಿಎ ಸದಸ್ಯರಾದ ಕುಮಾರ ಎಳ್ಳಿಗುತ್ತಿ, ಮೋಹನ ನಾಡಗೌಡರ, ಉಪ ವಿಭಾಗಾಧಿಕಾರಿ ಎಂ.ಗಂಗಪ್ಪ, ಬಿಟಿಡಿಎ ಆಯುಕ್ತ ಗಣಪತಿ ಪಾಟೀಲ, ಮುಖ್ಯ ಇಂಜಿನೀಯರ್ ಮನ್ಮಥಯ್ಯಸ್ವಾಮಿ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಶಂಕರಲಿಂಗ ಗೋಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.