ಬಾಗಲಕೋಟೆ : ಬಸವತತ್ವ ಪ್ರಚಾರಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟಿದ್ದ ಶರಣ ಡಾ.ಈಶ್ವರ ಮಂಟೂರ (48) ಗುರುವಾರ ಶಿವೈಕ್ಯರಾಗಿದ್ದಾರೆ.
ಗುರೂಜಿ ಕೈಲಾಸವಾಸಿಗಳಾದ ವಿಷಯ ತಿಳಿದ ನಂತರ ಹುನ್ನೂರ ಬಸವ ಜ್ಞಾನ ಗುರುಕುಲ ಯೋಗಾಶ್ರಮಕ್ಕೆ ಭೇಟಿ ನೀಡಿದ ಜಮಖಂಡಿ ಉಪವಿಭಾಗಾಧಿಕಾರಿ ಸಿದ್ದು ಹುಲ್ಲೊಳ್ಳಿ ಯೋಗಾಶ್ರಮದ ಭಕ್ತರು, ಗ್ರಾಮದ ಹಿರಿಯರ ಜೊತೆ ಅಂತ್ಯ ಸಂಸ್ಕಾರದ ವಿಧಿವಿಧಾನಗಳ ಕುರಿತು ಮಾತುಕತೆ ನಡೆಸಿದರು.
ನಾಳೆ (ಡಿ 10) ಬೆಳಿಗ್ಗೆ 11 ಗಂಟೆಗೆ ಯೋಗಾಶ್ರಮದಲ್ಲಿ ಗುರುಜಿ ಅಂತ್ಯಸಂಸ್ಕಾರದ ವಿಧಿಗಳು ನೆರವೇರಲಿವೆ. ಸ್ವತಃ ಈಶ್ವರ ಮಂಟೂರ ಅವರೇ ಸಮಾಧಿ ಸ್ಥಳವನ್ನು ಗುರುತಿಸಿದ್ದರು. ಅಲ್ಲಿಯೇ ಅಂತ್ಯಸಂಸ್ಕಾರ ನಡೆಯಲಿದೆ.
ಗೃಹಸ್ಥಾಶ್ರಮಿಗಳಾಗಿಯೂ ಅಧ್ಯಾತ್ಮದ ಒಲವು ಬೆಳೆಸಿಕೊಂಡಿದ್ದ ಮಂಟೂರ ಅವರಿಗೆ ಪತ್ನಿ ಮತ್ತು ಇಬ್ಬರು ಮಕ್ಕಳಿಸಿದ್ದಾರೆ. ತಮ್ಮ ವಾಕ್ಚಾತುರ್ಯ ಮತ್ತು ಮನಮುಟ್ಟುವ ಕಥನ ಶೈಲಿಯಿಂದ ಅವರು ಜನಪ್ರಿಯರಾಗಿದ್ದರು. ಬುಧವಾರ ರಾತ್ರಿ ಗುರೂಜಿ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಅಸ್ವಸ್ಥರಾಗಿದ್ದ ಅವರು ಜಮಖಂಡಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಬಾಗಲಕೋಟೆಗೆ ತೆರಳುವ ವೇಳೆ ಮೃತಪಟ್ಟರು. ಅವರಿಗೆ ಹೃದಯ ಸ್ತಂಭನ ಆಗಿರಬಹುದು ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.