ಬಾಗಲಕೋಟೆ: ಗೋಮಾಳ ಜಾಗ ದುರುಪಯೋಗ ಪಡಿಸಿಕೊಂಡಿರುವ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವು ಕಂಪ್ಯೂಟರ್ ಆಪರೇಟರ್ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಬಾಗಲಕೋಟೆ ತಾಲೂಕಿನ ಶೀಗಿಕೇರಿ ಗ್ರಾಮಸ್ಥರು ಜಿಲ್ಲಾಡಳಿತ ಭವನ ಎದುರು ಮಂಗಳವಾರ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅವರಿಗೆ ಮನವಿ ಸಲ್ಲಿಸಿದರು.
ಶೀಗಿಕೇರಿ ಗ್ರಾಮ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂಪ್ಯೂಟರ್ ಆಪರೇಟರ್ ಸಚಿವ ಶಿವರಾಮ ನಾಯಕ ಗ್ರಾಮದ ಸರ್ವೇ ನಂಬರ್ 124/1 ಎ ಸರ್ಕಾರಿ ಗೋಮಾಳ ಆಸ್ತಿಯಲ್ಲಿ ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಅದರಲ್ಲಿ ನಿವೇಶನಗಳನ್ನು ಮಾಡಿ ಪ್ರತಿಯೊಬ್ಬರ ಹೆಸರಿನಲ್ಲಿ ಗಣಕೀಕೃತ ಉತಾರ ರೂಪಿಸಿ ಗೋಲಮಾಲ್ ಮಾಡಿದ್ದಾರೆ. ಈ ಹಿಂದೆ ಹಲಾವರು ಬಾರಿ ಅಕ್ರಮ ಎಸಗುತ್ತಾ ಬಂದಿದ್ದಾನೆ. ಕೂಡಲೇ ತನಿಖೆ ನಡೆಸಿ ಶಿಸ್ತು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಗ್ರಾಮಸ್ಥರಾದ ರತ್ನವ್ವ ಬೋಕನಕೇರ, ಶಂಕ್ರವ್ವ ಹೆಬ್ಬನವನರ, ರೇಣವ್ವ ಮಾರಂಡಗಿ, ರತ್ನವ್ವ ಶೆಬ್ಬನವರ, ಶಾರದಾ ಕಟಗೇರಿ, ಶೈಲಾ ಮೊರಟಗಿ, ಶಂಕ್ರಪ್ಪ ಬಳಿಗಾರ ಇತರರು ಇದ್ದರು.