ಔರಾದ: ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ಶನಿವಾರ ಔರಾದನ ಇತಿಹಾಸ ಪ್ರಸಿದ್ಧ ದೇವಸ್ಥಾನ ಶ್ರೀ ಅಮರೇಶ್ವರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ನಾಡಿನೊಳಿತಿಗಾಗಿ ಪ್ರಾರ್ಥಿಸಿದರು.
ಜಾತ್ರಾ ಮಹೋತ್ಸವದ ನಿಮಿತ್ತ ಪಟ್ಟಣದಲ್ಲಿ ಅದ್ದೂರಿಯಾಗಿ ಜರುಗಿದ ಪಲ್ಲಕಿ ಉತ್ಸವ ಮೆರವಣಿಗೆಯಲ್ಲಿ ಪ್ರತಿ ವರ್ಷದಂತೆ ಭಾಗವಹಿಸಿ ಪೂಜೆ, ಆರತಿ ನೆರವೇರಿಸಿ ಭಕ್ತಿಭಾವ ಸಮರ್ಪಿಸಿದರು. ಇದೇ ವೇಳೆ ಭಕ್ತರು ಹಾಗೂ ಅಭಿಮಾನಿಗಳೊಂದಿಗೆ ಹಾಡುಗಳಿಗೆ ಹೆಜ್ಜೆ ಹಾಕಿ ಗಮನ ಸೆಳೆದರು. ಬಳಿಕ ಭಕ್ತಾದಿಗಳ ಜೊತೆಗೆ ಅಗ್ನಿಕುಂಡಕ್ಕೆ ಸುತ್ತುಹಾಕಿ ಭಕ್ತಿ ಮೆರೆದರು.
ಜಾತ್ರೆಗೆ ಆಗಮಿಸುವ ಭಕ್ತರಿಗಾಗಿ ಪಟ್ಟಣ ವಿವಿಧೆಡೆ ಪ್ರಸಾದದ ವ್ಯವಸ್ಥೆ ಮಾಡಲಾಗುತ್ತದೆ. ಶಾಸಕರು ಪ್ರಸಾದ ವಿತರಣೆ ಸ್ಥಳಕ್ಕೆ ತೆರಳಿ ತಮ್ಮ ಕೈಯಿಂದ ಪ್ರಸಾದ ವಿತರಿಸಿ ಸಂತೋಷಪಟ್ಟರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಔರಾದನ ಆರಾಧ್ಯ ದೈವ ಶ್ರೀ ಅಮರೇಶ್ವರ ಜಾತ್ರಾ ಮಹೋತ್ಸವವು ಬಹಳಷ್ಟು ವೈವಿದ್ಯತೆಯಿಂದ ನಡೆಯುತ್ತದೆ. ಇತಿಹಾಸ ಪ್ರಸಿದ್ಧವಾದ ದೇವಸ್ಥಾನದಲ್ಲಿ ಭಕ್ತಾದಿಗಳ ಎಲ್ಲ ಬೇಡಿಕೆಗಳು ಈಡೇರುತ್ತವೆ. ಸಂಕಷ್ಟಗಳೆಲ್ಲ ಪರಿಹಾರವಾಗುತ್ತವೆ ಎಂದರು.
ಜಾತ್ರೆಯಲ್ಲಿ ಕರ್ನಾಟಕವಲ್ಲದೇ ತೆಲಂಗಾಣಾ ಹಾಗೂ ಮಹಾರಾಷ್ಟ್ರದಿಂದಲೂ ಸಹಸ್ರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆಯುತ್ತಾರೆ. ಪ್ರತಿ ವರ್ಷ ಭಕ್ತಾದಿಗಳ ಸಂಖ್ಯೆ ಹೆಚ್ಚಾಗುತ್ತಿರುವುದಕ್ಕೆ ಸಾಕಷ್ಟು ಸಂತೋಷವಾಗುತ್ತಿದೆ. ನಾನು ಕೂಡ ಪ್ರತಿ ವರ್ಷ ಐತಿಹಾಸಿಕ ಜಾತ್ರೆಯಲ್ಲಿ ಪಾಲ್ಗೊಂಡು ಜನತೆಯ ಸುಖ, ಶಾಂತಿ ಮತ್ತು ಸಮೃದ್ಧಿಗಾಗಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಔರಾದ(ಬಿ) ಎಪಿಎಂಸಿ ಅಧ್ಯಕ್ಷರಾದ ದೊಂಡಿಬಾ ನರೋಟೆ, ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಶಿವಾಜಿರಾವ ಪಾಟೀಲ ಮುಂಗನಾಳ, ಪ್ರತೀಕ ಚವ್ಹಾಣ, ಪ್ರಕಾಶ ಅಲ್ಮಾಜೆ, ಅಶೋಕ ಅಲ್ಮಾಜೆ, ಸಚಿನ್ ರಾಠೋಡ್, ಸೂರ್ಯಕಾಂತ ಅಲ್ಮಾಜೆ, ಸಿದ್ಧರಾಮಪ್ಪ ನಿಡೋದೆ, ಕೇರಬಾ ಪವಾರ್, ರಮೇಶ ಗೌಡ, ಗುಂಡಪ್ಪ ಮುಧಾಳೆ ಸೇರಿದಂತೆ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.