ಕಡೂರು: ತಾಲೂಕಿನ ಎಮ್ಮೆದೊಡ್ಡಿ ಭಾಗದ ಸ.ನಂ. 70ರಲ್ಲಿ ರೈತರು ಜಮೀನು ಉಳುಮೆ ಮಾಡುತ್ತಿದ್ದು, ಇವರುಗಳಿಗೆ ಕಳೆದ 60 ವರ್ಷಗಳಿಂದ ಯಾವುದೇ ಸಾಗುವಳಿ ಪತ್ರ ದೊರಕಿರುವುದಿಲ್ಲ. ಹಲವಾರು ಹೋರಾಟಗಳ ಮಧ್ಯೆ ಈ ಭಾಗದ ಸುಮಾರು 55 ಜನ ರೈತರಿಗೆ ಸಾಗುವಳಿ ಪತ್ರ ದೊರಕಿಸಲಾಗಿದೆ. ಇನ್ನೂ 500 ಜನರಿಗೆ ಸಾಗುವಳಿಗೆ ಚೀಟಿ ಕೊಡಿಸಲು ಗುರಿ ಹೊಂದಲಾಗಿದೆ ಎಂದು ಶಾಸಕ ವೈ.ಎಸ್.ವಿ. ದತ್ತ ತಿಳಿಸಿದರು.
ಎಮ್ಮೆದೊಡ್ಡಿ ಗ್ರಾಮದ ಸಗುನಿಬಸವನಹಳ್ಳಿ ಗ್ರಾಮದಲ್ಲಿ ಆ ಭಾಗದ ಸುಮಾರು 55 ಜನರಿಗೆ ಸಾಗುವಳಿ ಪತ್ರ ವಿತರಿಸಿ ಮಾತನಾಡಿದರು. ಈ ಭಾಗದ ರೈತರಿಗೆ ಯಾವುದೇ ಸಾಗುವಳಿ ಚೀಟಿ ದೊರಕಿಸಲು ಸಾಧ್ಯವಾಗಿರಲಿಲ್ಲ. ಸ.ನಂ. 70 ರ ಜಮೀನುಗಳಿಗೆ ಸಾಗುವಳಿ ಚೀಟಿ ದೊರಕಿಸಲು ಕಠಿಣವಾಗಿತ್ತು. ಈ ಜಮೀನಿನ ಬಗ್ಗೆ ಹೈಕೋರ್ಟ್ ನಲ್ಲಿ ಕೇಸು ದಾಖಲಿಸಲಾಗಿತ್ತು. ಇದರಲ್ಲಿ ಕಂದಾಯ ಸಚಿವರಾದ ಕಾಗೋಡು ತಿಮ್ಮಪ್ಪ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಶ್ರಮವಿದೆ ಎಂದರು.
ಸಾಗುವಳಿ ಪತ್ರ ದೊರಕಿಸುವಲ್ಲಿ ಜಿಲ್ಲಾಧಿಕಾರಿಗಳಾದ ಶ್ರೀರಂಗ ಹಾಗೂ ತಹಸೀಲ್ದಾರ್ ಭಾಗ್ಯ ಇವರ ಕೊಡುಗೆ ಅಪಾರವಾಗಿದೆ. ಯಾವುದೇ ಅಧಿಕಾರಿಗಳಾಗಲೀ, ರಾಜಕಾರಣಿಗಳಾಗಲೀ ಸಾಗುವಳಿದಾರರಿಂದ ಯಾವುದೇ ಹಣ ಪಡೆದಿಲ್ಲ. ರೈತರ ಪರ ಹೋರಾಟವನ್ನು ಮಾಡಿ ಸಾಗುವಳಿ ಪತ್ರ ದೊರಕಿಸಿಕೊಡಲಾಗಿದೆ. ಸಾಗುವಳಿ ಪತ್ರ ದೊರಕಿಸಿಕೊಡಬಾರದು ಎಂಬ ಉದ್ದೇಶದಿಂದ ಪಟ್ಟಬದ್ಧ ಹಿತಾಸಕ್ತಿಗಳು ಇದರ ಬಗ್ಗೆ ಕೇಸು ಹಾಕಿದ್ದವು. ಕಡುಬಡವರಿಗೆ ಬೆಳಕು ನೀಡಿದ ಸಮಾಧಾನ ಇದೆ ಎಂದು ಹೇಳಿದರು.
ಈ ಸಾಗುವಳಿ ಪತ್ರದ ವಿಷಯದಲ್ಲಿ ಸುಮಾರು 577 ಜನರ ಮೇಲೆ ಕೇಸು ಹಾಕಿಸಲಾಗಿತ್ತು. ಹಲವಾರು ಕೇಸುಗಳಲ್ಲಿ ಗೆದ್ದು ನಂತರ ಸಾಗುವಳಿ ಚೀಟಿ ದೊರಕಿಸಲಾಗಿದೆ. ಜನರು ನೀಡಿದ ಶಕ್ತಿಯ ಫಲವಾಗಿ ಕೆಲಸ ಮಾಡಲಾಗಿದೆ. ಸಾಗುವಳಿ ಚೀಟಿ ಸಿಗದಂತೆ ನೋಡಿಕೊಂಡ ಜನರಿಗೆ ಇದು ತಕ್ಕ ಪಾಠವಾಗಲಿದೆ. ಇದರ ಬಗ್ಗೆ ಭಾರೀ ಪ್ರಯತ್ನಗಳು ನಡೆದವು. ಬಡವರ ಬಗ್ಗೆ ಕೀಳು ರಾಜಕಾರಣ ಮಾಡದೆ ರಾಜಮಾರ್ಗದಲ್ಲಿ ರಾಜಕಾರಣ ಮಾಡಬೇಕಿದೆ ಎಂದರು.