ಕೆ.ಆರ್.ಪೇಟೆ: ಗೊರೂರು ಹೇಮಾವತಿ ಜಲಾಶಯದಿಂದ ನದಿಗೆ ಸುಮಾರು ಒಂದು ಲಕ್ಷ ಕ್ಯುಸೆಕ್ ನೀರನ್ನು ಹೊರ ಬಿಟ್ಟಿರುವ ಕಾರಣ ತಾಲೂಕಿನ ಸುಮಾರು 45ಕಿ.ಮೀ ದೂರದಷ್ಟು ಹರಿಯುವ ಹೇಮಾವತಿ ನದಿ ಪಾತ್ರದಲ್ಲಿ ಪ್ರವಾಹ ಪರಿಸ್ಥಿತಿವುಂಟಾಗಿದ್ದು, ಜಲ ವಿದ್ಯುತ್ ಕೇಂದ್ರ ಜಲಾವೃತವಾಗಿದ್ದು, ಸಾಕಷ್ಟು ಹಾನಿ ಸಂಭವಿಸಿದೆ.
ಹೇಮಗಿರಿ ದೇವಾಲಯದ ನದಿ ತೀರದಲ್ಲಿ ಗುಡಿಸಲು ನಿರ್ಮಿಸಿಕೊಂಡು ವಾಸವಾಗಿದ್ದ ಮೀನುಗಾರರ ಕುಟುಂಬಗಳನ್ನು ಮುಂಜಾಗ್ರತಾ ಕ್ರಮವಾಗಿ ಪಾಂಡವಪುರ ಉಪವಿಭಾಗಾಧಿಕಾರಿ ಎಂ.ಶೈಲಜಾ ಮತ್ತು ತಹಸೀಲ್ದಾರ್ ಎಂ.ಶಿವಮೂರ್ತಿ ಅವರ ನೇತೃತ್ವದಲ್ಲಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ತಾಲೂಕಿನ ಬಂಡಿಹೊಳೆ ಸಮೀಪ ನಿರ್ಮಾಣ ಮಾಡಿದ್ದ ತ್ರಿಶೂಲ್ ಜಲ ವಿದ್ಯುತ್ ಕೇಂದ್ರ ನದಿ ನೀರಿನಲ್ಲಿ ಮುಳುಗಿ ಅಪಾರ ನಷ್ಟ ಸಂಭವಿಸಿದೆ. ಮಣ್ಣು ಮಿಶ್ರಿತ ನದಿಯ ನೀರು ಜಲ ವಿದ್ಯುತ್ ಕೇಂದ್ರಕ್ಕೆ ನುಗ್ಗಿರುವುದರಿಂದ ಟರ್ಬೈನ್ ಗಳು ಮುಳುಗಿವೆ. ಇದರಿಂದ ಕೋಟ್ಯಂತರ ರೂ. ನಷ್ಟ ಸಂಭವಿಸಿದೆ. ಟರ್ಬೈನ್ ಜೊತೆಗೆ ಹಲವು ಯಂತ್ರಗಳಿಗೂ ನೀರು ನುಗ್ಗಿದೆ. ನೀರು ಹೊರ ಹಾಕಲು ಸಾಧ್ಯವಾಗದೆ, ಅಧಿಕಾರಿಗಳು ಮತ್ತು ನೌಕರರು ಕೇಂದ್ರದಿಂದ ಹೊರ ಬಂದಿದ್ದಾರೆ. ಜಲ ವಿದ್ಯುತ್ ಕೇಂದ್ರ ಸಮೀಪವಿದ್ದ ಜಮೀನುಗಳಿಗೂ ನೀರು ನುಗ್ಗಿದ್ದು, ಅಪಾರ ನಷ್ಟವಾಗಿದೆ.
ಚಿಕ್ಕಮಂದಗೆರೆ ಗ್ರಾಮದ ಬಳಿ ನೂರಾರು ಎಕರೆ ಜಮೀನಿಗೆ ನೀರು ನುಗ್ಗಿದ್ದು, ಅಪಾರ ಪ್ರಮಾಣದ ಬೆಳೆ ಹಾನಿ ಉಂಟಾಗಿದೆ. ನದಿಯ ನೀರಿನ ರಭಸಕ್ಕೆ ಬೆಳೆಗಳು ಕೊಚ್ಚಿ ಹೋಗಿವೆ. ಕಿರು ಸೇತುವೆಗಳು ಮುಚ್ಚಿ ಹೋಗಿವೆ. ಮುಳುಗಡೆ ಭೀತಿಯಲ್ಲಿರುವ ಚಿಕ್ಕಮಂದಗೆರೆ ಗ್ರಾಮಕ್ಕೆ ನೀರು ನುಗ್ಗಿದ್ದು ಹಲವಾರು ಮನೆಗಳು ಜಲಾವೃತವಾಗಿವೆ. ಗ್ರಾಮಸ್ಥರೇ ಮುಂದೆ ನಿಂತು ಸಹಾಯಹಸ್ತ ಚಾಚುತ್ತಿದ್ದಾರೆ. ಮಂದಗೆರೆ ಸಮೀಪದ ಕುರಾವು ಹೇಮಾವತಿ ನದಿಯಿಂದ ಜಲಾವೃತಗೊಂಡಿದ್ದು ಅಲ್ಲಿದ್ದ ಹಲವು ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿದೆ. ಬಂಡಿಹೊಳೆ, ನಾಟನಹಳ್ಳಿ, ಬೆಳತೂರು, ಮಡುವಿನಕೋಡಿ, ಆಲಂಬಾಡಿ, ಕಟ್ಟೆಕ್ಯಾತನಹಳ್ಳಿ, ಕಟ್ಟಹಳ್ಳಿ, ಭೂವರಹನಾಥಕಲ್ಲಹಳ್ಳಿ, ದಡದಹಳ್ಳಿ, ಅಕ್ಕಿಹೆಬ್ಬಾಳು ಮತ್ತಿತರರ ಗ್ರಾಮಗಳ ಸಾವಿರಾರು ಎಕರೆ ಜಮೀನಿಗೆ ನದಿಯ ನೀರು ನುಗ್ಗಿದೆ. ಇದರಿಂದ ತೆಂಗು, ಬಾಳೆ, ಅಡಿಕೆ, ಕಬ್ಬು ಮತ್ತಿತರರ ಬೆಳೆಗಳು ನೀರಿನಿಂದ ಜಲಾವೃತಗೊಂಡಿವೆ. ಜತೆಗೆ ನೀರಿನ ರಭಸಕ್ಕೆ ಬೆಳೆಗಳು ನಾಶವಾಗಿ ರೈತರಿಗೆ ಕೊಟ್ಯಂತರ ರೂ ನಷ್ಟ ಉಂಟಾಗಿದೆ.