ಹುಣಸೂರು: ತಾಲೂಕಿನ ಗಾವಡಗೆರೆ ಹೋಬಳಿಯ ಹರವೆಕಲ್ಲಹಳಿ ವ್ಯಾಪ್ತಿಯಲ್ಲಿ ಸುರಿದ ಭಾರೀ ಮಳೆಗಾಳಿಗೆ ತೀವ್ರ ಪ್ರಮಾಣದಲ್ಲಿ ಹಾನಿ ಸಂಭವಿಸಿದ್ದು ಜನ ಪರದಾಡುವಂತಾಗಿದೆ.
ಗ್ರಾಮದ ಹತ್ತಕ್ಕೂ ಹೆಚ್ಚು ಮನೆಗಳ ಮೇಲ್ಛಾವಣಿಗೆ ಹಾನಿಯಾಗಿದ್ದರೆ, ಬಾಳೆ ಬೆಳೆ ನೆಲಕಚ್ಚಿದ್ದರೆ, ತೆಂಗು-ಅಡಿಕೆ ಮರಗಳು ಹಾಗೂ ಜಮೀನಿನಲ್ಲಿರುವ ಮರಗಳು ಸಹ ನೆಲಕ್ಕುರುಳಿವೆ. 10ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ.
ನಿವಾಸಿಗಳಾದ ರಮೇಶ, ಮಲ್ಲೇಗೌಡ, ಪ್ರಕಾಶ, ಬೋರೇಗೌಡ, ಸಣ್ಣ ತಮ್ಮೇಗೌಡ, ಶೇಖರೇಗೌಡರ ಎಂಬುವರ ಮನೆಗಳ ಮೇಲ್ಚಾವಣಿ ಹಾರಿ ಹೋಗಿದ್ದು, ಕಲ್ನಾರ್ಶೀಟ್ ಮತ್ತು ಹೆಂಚುಗಳಿಗೆ ಹಾನಿಯಾಗಿದೆ.
ಇನ್ನು ದೇವೇಂದ್ರ ಹಾಗೂ ನಾಗರಾಜ್ರಿಗೆ ಎಂಬುವರಿಗೆ ಸೇರಿದ ಮನೆ ಮೇಲೆ ತೆಂಗಿನ ಮರ ಉರುಳಿ ಬಿದ್ದು ಸಾಕಷ್ಟು ಹಾನಿಯಾಗಿದೆ. ಎರಡು ಎಕರೆ ಪ್ರದೇಶದಲ್ಲಿ ಬೆಳೆಯಲಾಗಿದ್ದ ಬಾಳೆ ಬೆಳೆ ಹಾಗೂ ರಾಜಣ್ಣ ಎಂಬುವರಿಗೆ ಸೇರಿದ ಅಡಿಕೆ ಹಾಗೂ ತೆಂಗಿನ ಮರಗಳು ಕೂಡ ಧರೆಗುರುಳಿವೆ. ಗ್ರಾಮದೊಳಗಿನ ವಿದ್ಯುತ್ ತಂತಿಯ ಮೇಲೆ ಮರಬಿದ್ದು, ಹತ್ತಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಹಾನಿಯಾಗಿದ್ದು, ತಕ್ಷಣವೇ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದಾಗಿ ಭಾರೀ ಅನಾಹುತ ತಪ್ಪಿದೆ. ಇನ್ನು ಗ್ರಾಮದ ಹೊರವಲಯದ ಜಮೀನಿನಲ್ಲಿದ್ದ ವಿವಿಧ ಜಾತಿಯ ನೂರಾರು ಮರಗಳು ನೆಲಕಚ್ಚಿವೆ.
ವಿಷಯ ತಿಳಿಯುತ್ತಿದ್ದಂತೆ ತಹಸೀಲ್ದಾರ್ ಬಸವರಾಜು, ಉಪತಹಸೀಲ್ದಾರ್ ಲೋಕೇಶ್, ಆರ್ಐ ಸಂಜೀವಮೂರ್ತಿ, ಗ್ರಾಮಲೆಕ್ಕಿಗ ವಿಜೇತ ಹಾನಿಗೀಡಾದ ಹರವೆಕಲ್ಲಹಳ್ಳಿಗೆ ಕಂದಾಯ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದ್ದು ನಷ್ಟದ ಮಾಹಿತಿ ಪಡೆದುಕೊಂಡಿದ್ದಾರೆ.