ಹಿರೀಕ್ಯಾತನಹಳ್ಳಿ: ಹುಣಸೂರು ತಾಲೂಕಿನ ಹಿರೀಕ್ಯಾತನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರು ವಿದ್ಯಾಗಮ ನಿರಂತರ ಕಲಿಕಾ ಯೋಜನೆಯಡಿ ಗ್ರಾಮೀಣ ಮಕ್ಕಳಿಗೆ ಪಾಠವನ್ನು ಮಾಡುತ್ತಿದ್ದು, ವಿದ್ಯಾರ್ಥಿಗಳು ಉತ್ಸಾಹದಿಂದಲೇ ಕಲಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದು ಕಂಡು ಬಂದಿದೆ.
ಕಲಿಕೆಯಿಂದ ದೂರ ಉಳಿದಿರುವುದನ್ನು ಮನಗಂಡ ಶಿಕ್ಷಣ ಇಲಾಖೆಯು ಪ್ರೌಢಶಾಲಾ ಮಕ್ಕಳಿಗೆ ಶಾಲಾ ವ್ಯಾಪ್ತಿಯ ಗ್ರಾಮಗಳಲ್ಲಿ ಮಕ್ಕಳಿಗೆ ಬೋಧನೆ ಮಾಡುತ್ತಿದ್ದು, ಇದರಲ್ಲಿ ವಿದ್ಯಾರ್ಥಿಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಿ ಪ್ರತಿ ಗುಂಪಿಗೆ ಜನವಸತಿ ಪ್ರದೇಶದಲ್ಲಿ ಶಿಕ್ಷಕರನ್ನು ನೇಮಿಸಿಕೊಂಡು ಮಕ್ಕಳಿಗೆ ಬೋಧನೆ ಮಾಡುವುದಲ್ಲದೆ, ಅಭ್ಯಾಸವನ್ನು ಬರೆಯಲು ಹಾಳೆಗಳನ್ನು ಬಳಸಲು ಅವಕಾಶ ನೀಡಲಾಗುತ್ತಿದೆ. ಈ ರೀತಿಯ ಕಲಿಕೆಗೆ ಪೋಷಕರು ಕೂಡ ಸಹಕಾರ ನೀಡುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಹಾಜರಾತಿಯು ಪ್ರಥಮ ದಿನದಲ್ಲೆ ಶೇ.50ರಷ್ಟು ಹಾಜರಾತಿ ಕಂಡು ಬಂದಿರುವುದು ಮಕ್ಕಳು ಶಿಕ್ಷಣದ ಕಲಿಕೆಯ ಕಡೆ ಆಸಕ್ತಿ ತೋರುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ.
ಒಂದು ಗ್ರಾಮಕ್ಕೆ ಮಾರ್ಗದರ್ಶಿ ಶಿಕ್ಷಕರನ್ನು ನೇಮಿಸುವುದರ ಜೊತೆಗೆ ವಿಷಯವಾರು ಶಿಕ್ಷಕರು ಕೇವಲ ಒಂದು ವಿಷಯದ ಬಗ್ಗೆ ಬೋಧಿಸುವುದಲ್ಲದೆ ಎಲ್ಲ್ಲ ವಿಷಯಗಳ ಬಗ್ಗೆ ಬೋಧಿಸಬೇಕು ಎಂಬುದಾಗಿ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದ್ದು, ಅದರಂತೆ ಶಿಕ್ಷಕರು ಪಾಠ-ಪ್ರವಚನದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಇದಲ್ಲದೆ, ಗ್ರಾಮಗಳಲ್ಲಿ ಮಕ್ಕಳಿಗೆ ಬೋಧನೆ ಮಾಡುವಾಗ ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಮತ್ತು ಸ್ಯಾನಿಟೈಸರ್ ನೀಡಿ ಕೋವಿಡ್-19 ವೈರಸ್ ಹರಡುವುದನ್ನು ತಪ್ಪಿಸಲು ಮುಂಜಾಗೃತಾ ಕ್ರಮಗಳನ್ನು ಕಾಯ್ದುಕೊಳ್ಳಲಾಗಿದೆ.
ಈ ಕುರಿತಂತೆ ಮಾತನಾಡಿದ ಹಿರೀಕ್ಯಾತನಹಳ್ಳಿ ಸರ್ಕಾರಿ ಪ್ರೌಢ ಶಾಲಾ ಮುಖ್ಯೋಪಾಧ್ಯಾಯರಾದ ಕೆ.ಸಿ.ನರಸಿಂಹಮೂರ್ತಿ ಅವರು, ಶಾಲಾ ಮಕ್ಕಳಿಗೆ ಪಠ್ಯ ಪುಸ್ತಕ ಅಕ್ಷರ ದಾಸೋಹ ಪಡಿತರದ ಅಕ್ಕಿ-ಬೇಳೆ ನೀಡಿದ್ದು, ಮಕ್ಕಳಿಗೆ ಪ್ರತಿ ದಿನ ಬೆಳಗ್ಗೆ 10 ರಿಂದ 2 ಗಂಟೆಯವರೆಗೆ ಪ್ರೌಢಶಾಲಾ ವ್ಯಾಪ್ತಿಯ ಆಯಾಯ ಗ್ರಾಮಗಳಲ್ಲಿ ದೇವಸ್ಥಾನ ಆವರಣ, ಸಮುದಾಯ ಭವನ, ಗ್ರಾಮದ ಜನರ ದೊಡ್ಡ ತೊಟ್ಟಿಮನೆಯ ಪಡಸಾಲೆಯಲ್ಲಿ ಬೋಧನೆ ಮಾಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.