ಬೆಂಗಳೂರು, – ಜೀವನದಲ್ಲಿ ಹಿಂದೆ ಮಾಡಿದ್ದ ತಪ್ಪಿನ ಅರಿವಾಗಿದೆ. ಹಾಗಾಗಿ, ಸಿಡಿಯಂತಹ ಷಡ್ಯಂತ್ರದಲ್ಲಿ ಸಿಲುಕುವ ವ್ಯಕ್ತಿ ನಾನಲ್ಲ. ನಾನು ಯಾವುದೇ ಬ್ಲಾಕ್ ಮೇಲïಗಳಿಗೂ ಹೆದರಲ್ಲ, ವಿಚಲಿತನಾಗುವುದೂ ಇಲ್ಲ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ .ರೇಣುಕಾಚಾರ್ಯ ಹಳೆ ಪ್ರಕರಣವನ್ನು ಉಲ್ಲೇಖಿಸಿ ಸಿಡಿ ಕೇಸ್ ಇದೆ ಎಂದು ಬರುತ್ತಿರುವ ಸುದ್ದಿಗಳನ್ನು ತಿರಸ್ಕರಿಸಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಡಿ ಸೇರಿದಂತೆ ಯಾವುದೇ ಷಡ್ಯಂತ್ರಕ್ಕೂ ನಾನು ಹೆದರುವುದಿಲ್ಲ. ಹಿಂದೆ ಜೀವನದಲ್ಲಿ ಯಾವ ತಪ್ಪು ಮಾಡಿದ್ದಾ, ಆ ತಪ್ಪಿನ ಅರಿವು ನನಗಾಗಿದೆ. ಹಾಗಾಗಿ ಷಡ್ಯಂತ್ರಕ್ಕೆ ಒಳಗಾಗುವ ವ್ಯಕ್ತಿ ನಾನಲ್ಲ. ನಾನು ತಪ್ಪು ಮಾಡಿದ್ರೆ, ನನ್ನ ಕುಟುಂಬ ಸದಸ್ಯರು ಕೇಳುತ್ತಾರೆ, ಶಿಕ್ಷೆ ಕೊಡುತ್ತಾರೆ ಎಂದರು.ಯಾರಾದರೂ ಬ್ಲಾಕ್ ಮೇಲ್ ಮಾಡಿದರೆ, ಈ ರಾಜಕಾರಣದಲ್ಲಿ ರೇಣುಕಾಚಾರ್ಯ ಯಾವತ್ತೂ ಅದಕ್ಕೆಲ್ಲೇ ಜಗ್ಗುವುದಿಲ್ಲ, ಬಗ್ಗುವುದಿಲ್ಲ. ನಾನು ನಾನಾಗಿಯೇ ಇರುತ್ತೇನೆ. ಯಾವತ್ತೂ ವಿಚಲಿತನಾಗಿಲ್ಲ ಎಂದರು. ಒಂದು ವೇಳೆ ನಾನು ತಪ್ಪು ಮಾಡಿದರೆ, ತಪ್ಪಿನ ಅರಿವನ್ನು ಅರಿತುಕೊಂಡು ನಾನೊಬ್ಬ ಪ್ರಬುದ್ಧ ಮನುಷ್ಯನಾಗಿ ರಾಜಕಾರಣ ಮಾಡುತ್ತೇನೆಯೇ ಹೊರತು ಬ್ಲಾಕ್ ಮೇಲ್ ತಂತ್ರಗಾರಿಕೆ ಯಾವತ್ತೂ ನನ್ನ ಬಳಿ ನಡೆಯುವುದಿಲ್ಲ ಎಂದು ಹೇಳಿದರು.
ಕೆಲ ಸಚಿವರು, ರಾಜಕಾರಣಿಗಳು ತಮ್ಮ ತೇಜೋವಧೆ ಮಾಡುವಂತಹ ವರದಿ ಪ್ರಸಾರಕ್ಕೆ ನ್ಯಾಯಾಲಯದಿಂದ ತಡೆ ತಂದ ರೀತಿ ನೀವು ತರುತ್ತೀರಾ ಎನ್ನುವ ಪ್ರಶ್ನೆಗೆ , ಆ ಬಗ್ಗೆ ಇದುವರೆಗೂ ಯೋಚನೆ ಮಾಡಿಲ್ಲ. ನನಗೆ ಏನೂ ಗೊತ್ತಿಲ್ಲ. ನಾನು ನಮ್ಮ ರಾಜ್ಯ ನಾಯಕರನ್ನು, ಸಚಿವರನ್ನು ಭೇಟಿ ಮಾಡಲು ಬಂದಿದ್ದೇನೆ ಅಷ್ಟೇ. ಮಾಧ್ಯಮಗಳು ಷಡ್ಯಂತ್ರ ನಡೆಯುತ್ತಿರುವ ಬಗ್ಗೆ ನನ್ನನ್ನು ಕೇಳಿದಾಗ ನನಗೆ ಆಶ್ಚರ್ಯವಾಗಿದೆ. ನಾನು ಎಂದಿಗೂ ವಿಚಲಿತನಾಗುವುದಿಲ್ಲ ಎಂದರು.