ಚಾಮರಾಜನಗರ: ಕೊಳ್ಳೇಗಾಲದಲ್ಲಿ ಡಾ.ಅಂಬೇಡ್ಕರ್ ಕಮಾನಿಗೆ ಕಿಡಿಗೇಡಿಗಳು ಅಪಮಾನ ಮಾಡಿದ ಘಟನೆಗೆ ಸಂಬಂಧಿಸಿದಂತೆ ಸಮೀಪದ ಹನೂರಲ್ಲಿ ಕೆಲವು ಪುಂಡರು ದಿಢೀರ್ ಅಕ್ರಮ ಪ್ರತಿಭಟನೆ ನಡೆಸಿ ಸಾರ್ವಜನಿಕರ ನೆಮ್ಮದಿಗೆ ಭಂಗ ತಂದ ಆರೋಪದಡಿ ಸುಮಾರು 12ಕ್ಕೂ ಹೆಚ್ಚು ಜನರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಹನೂರಿನ ಅಂಬೇಡ್ಕರ್ ಕಾಲೋನಿಯ ನಿವಾಸಿಗಳಾದ ಮಧು ಅ.ಕೆಕ್ಕ, ರಾಜೇಶ್, ಟ್ರಾಕ್ಟರ್ ಚಾಲಕ ಭರತ್, ಚಂದ್ರು, ಸಿದ್ಧರಾಜು, ವೆಂಕಟೇಶ್ ಬಿನ್.ರಂಗಮಾದ, ಮಹೇಶ, ಮಧು, ಸಿದ್ಧಯ್ಯ, ಸ್ವಾಮಿ, ಪ್ರೇಮ್ ಕುಮಾರ್ ಸೇರಿದಂತೆ ಹಲವರ ಮೇಲೆ ಕೇಸು ದಾಖಲು ಮಾಡಲಾಗಿದೆ.
ಜ.13ರಂದು ಕೊಳ್ಳೇಗಾಲದ ಭೀಮ ನಗರದ ಕಮಾನಿನಲ್ಲಿದ್ದ ಡಾ.ಅಂಬೇಡ್ಕರ್ ಭಾವಚಿತ್ರಕ್ಕೆ ಕಿಡಿಗೇಡಿಗಳ್ಯಾರೋ ಅಪಮಾನ ಮಾಡಿದ್ದರು ಖಂಡಿಸಿ ಹನೂರಿನಲ್ಲಿ ಗುಂಪೊಂದು ಜ 14ರ ಬೆಳಗ್ಗೆ ಯಾವುದೇ ಅನುಮತಿ ಪಡೆಯದೆ ಅಕ್ರಮ ಕೂಟ ಕಟ್ಟಿಕೊಂಡು ಏಕಾಏಕಿ ಬಸ್ ನಿಲ್ದಾಣ ಇನ್ನಿತರೆ ಕಡೆ ಜಮಾಯಿಸಿ ರಸ್ತೆಗಳಲ್ಲೆಲ್ಲಾ ಎಲ್ಲೆಂದರಲ್ಲಿ ಪಟ್ಟಣದ ಹಲವೆಡೆ ಟೈರ್ಗಳನ್ನು ಪೇರಿಸಿ ಬೆಂಕಿ ಹಚ್ಚಿ ವಾಹನ ಸಂಚಾರಕ್ಕೆ ತಡೆಯೊಡ್ಡಿದ್ದಲ್ಲದೆ, ಚಿಕ್ಕಲ್ಲೂರು ಜಾತ್ರೆ ಸೇರಿದಂತೆ ವಿವಿಧ ಕಡೆಗಳಿಗೆ ತೆರಳುತ್ತಿದ್ದ ವಾಹನಗಳನ್ನು ಅಡ್ಡಗಟ್ಟಿ ಅಲ್ಲಿದ್ದ ಪ್ರಯಾಣಿಕರನ್ನು ಬೆದರಿಸಿ ಹಾಗೂ ಬಲವಂತವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವಂತೆ ಅಂಗಡಿ ಮಾಲೀಕರಿಗೆ ಧಮಕಿ ಹಾಕಿದ್ದರು. ಅಂಗಡಿಗಳನ್ನು ಮುಚ್ಚಲು ನಿರಾಕರಿಸಿದ ಕೆಲ ಅಂಗಡಿಗಳಿಗೆ ಕಲ್ಲಿನಿಂದ ಹೊಡೆದು ನಷ್ಟವುಂಟು ಮಾಡಿ ಪಟ್ಟಣದಲ್ಲಿ ಭಯದ ವಾತಾವರಣ ನಿರ್ಮಿಸಿ ಸಾರ್ವಜನಿಕ ಶಾಂತಿ ನೆಮ್ಮದಿಗೆ ಭಂಗ ತಂದಿದ್ದರು.
ಇಂತಹವರ ಮೇಲೆ ಕ್ರಮ ಕೈಗೊಳ್ಳಲು ಮುಂದಾಗಿರುವ ಪೊಲೀಸರು ಕೃತ್ಯದಲ್ಲಿ ಭಾಗಿಯಾಗಿದ್ದ ಹಲವರ ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವ ಪೊಲೀಸರು ಶೋಧಕಾರ್ಯ ಮುಂದುವರೆಸಿದ್ದು, ಆರೋಪಿಗಳು ಅಕ್ರಮ ಕೂಟ ಕಟ್ಟಿಕೊಂಡು ಅಡ್ಡಾಡುವ ಸಂದರ್ಭದಲ್ಲಿ, ಪಟ್ಟಣ ಪಂಚಾಯ್ತಿ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ತಹಸೀಲ್ದಾರ್ ಕಚೆೇರಿ ಹಾಗೂ ಕೆಲ ವಾಣಿಜ್ಯ ಸಂಕೀರ್ಣಗಳಲ್ಲಿ ಅಳವಡಿಸಿದ್ದ ಸಿಸಿ ಟಿವಿಯಲ್ಲಿ ಸೆರೆಯಾಗಿರುವ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಇದೀಗ ಸುಮಾರು 12 ಮಂದಿ ವಿರುದ್ಧ ಆರೋಪದ ಮೇಲೆ, ಐಪಿಸಿ 143, 147, 341, 506, 427, ಆರ್/ಡಬ್ಲು 149, ಐಪಿಸಿ 2 (ಎ) ಕರ್ನಾಟಕ ಆಸ್ತಿನಾಶ ಮತ್ತು ಆಸ್ತಿನಷ್ಟ ತಡೆ ಅಧಿನಿಯಮ 1981ರ ಕಲಂಗಳಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.