ಚಿಕ್ಕಮಗಳೂರು: ಪೊಲೀಸರೆಂದರೆ ಕಾನೂನು ಪಾಲನೆ, ಭಯದ ವಾತಾವರಣ, ಖಡಕ್ ಎಚ್ಚರಿಕೆ ಮುಖವೇ ಕಾಣುವ ಹಲವು ಸಂದರ್ಭದಲ್ಲಿ ಪೊಲೀಸರಿಗೂ ಮಾನವೀಯತೆ ಇದೆ ಎಂಬುದು ಇಲ್ಲಿ ಸಾಬೀತಾಗಿದೆ.
ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಅಜ್ಜಂಪುರ ಸಮೀಪ ಬೇಗೂರು ಹಾಗೂ ತಮ್ಮಟದಹಳ್ಳಿ ಮಾರ್ಗ ಮಧ್ಯೆ ದೊಡ್ಡ ಸೇತುವೆ ಕಳಪೆ ಕಾಮಗಾರಿಯಿಂದ ಅರ್ಧ ಅಡಿಯಷ್ಟು ಅಗಲದ ಬಿರುಕು ಬಿಟ್ಟಿತ್ತು. ಈ ವೇಳೆ ಸ್ವತಃ ಅಜ್ಜಂಪುರ ಪಿಎಸ್ಐ ರಮೇಶ್, ಯಗಟಿ ಪಿಎಸ್ ಐ ವಿಶ್ವನಾಥ್ ಹಾಗೂ ಪೊಲೀಸ್ ಸಿಬ್ಬಂದಿ ಬಿರುಕು ಬಿಟ್ಟ ಸೇತುವೆಗೆ ಪುಡಿ ಕಲ್ಲುಗಳನ್ನ ತುಂಬಿ, ಸಿಮೆಂಟ್ ನಿಂದ ಸಾರಿಸಿ ನಂತರ ಪುಡಿ ಮಣ್ಣನ್ನು ಹಾಕಿ ಬಿರುಕು ಮುಚ್ಚಿ ಮಾನವೀಯತೆ ಮೆರೆದಿದ್ದಾರೆ.
ಸದ್ಯ ಕಳೆದ ಒಂದು ವಾರದಿಂದ ಅಜ್ಜಂಪುರ ಸಮೀಪದ ಅಂತರಗಟ್ಟೆ ದುರ್ಗಾಂಬ ದೇವಿ ಜಾತ್ರಾ ಮಹೋತ್ಸವ ನಡೆಯುತ್ತಿದ್ದು ಸುತ್ತಮುತ್ತಲಿನ ಹತ್ತಾರು ಗ್ರಾಮಗಳಿಂದ ಎತ್ತಿನ ಗಾಡಿಯಲ್ಲಿ ಜಾತ್ರೆಗೆ ಆಗಮಿಸಿ ಹರಕೆ ತೀರಿಸೋದು ಇಲ್ಲಿನ ಪ್ರತೀತಿ. ಹಾಗಾಗಿ ರೈತರು ಅತಿವೇಗದಲ್ಲಿ ಎತ್ತಿನ ಗಾಡಿಯನ್ನು ಓಡಿಸಿಕೊಂಡು ಬರುವಾಗ ಬಿರುಕಿನೊಳಗೆ ರಾಸಿನ ಕಾಲು ಸಿಕ್ಕಿಕೊಂಡು ಅಪಘಾತವಾಗುವ ಅಪಾಯವಿತ್ತು.