ಬೆಂಗಳೂರು: ಖ್ಯಾತ ವಿಜ್ಞಾನ ಬರಹಗಾರ, ಡಿಆರ್ಡಿಒ ಮಾಜಿ ವಿಜ್ಞಾನಿ ಹಾಲ್ದೊಡ್ಡೇರಿ ಸುಧೀಂದ್ರ (59) ಅವರು 10 ದಿನಗಳ ಸಾವು ಬದುಕಿನ ಹೋರಾಟದ ಬಳಿಕ ಇಂದು ಮಧ್ಯಾಹ್ನ 1 ಗಂಟೆಗೆ ವಿಧಿವಶರಾಗಿದ್ದಾರೆ.
10 ದಿನಗಳ ಹಿಂದೆ ಸುಧೀಂದ್ರ ಅವರಿಗೆ ತೀವ್ರ ಹೃದಯಾಘಾತವಾಗಿತ್ತು. ಚಿಕಿತ್ಸೆಗೆಂದು ಜೆಪಿ ನಗರದಲ್ಲಿರುವ ಏಸ್ಟರ್ ಎವಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಇಂದು ನಿಧನರಾದರು. ತಂದೆ ಆಸೆಯಂತೆಯೆ ನಾವು ಕುಟುಂಬಸ್ಥರು ಅವರ ದೇಹದಾನ ಮಾಡುವ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಸುಧೀಂದ್ರ ಅವರ ಪುತ್ರಿ ಮೇಘನಾ ಮಾಹಿತಿ ನೀಡಿದ್ದಾರೆ.
ಕನ್ನಡದಲ್ಲಿ ವಿಜ್ಞಾನ ಅಂಕಣಗಳಿಗೆ ಖ್ಯಾತರಾಗಿದ್ದ ಹಾಲ್ದೊಡ್ಡೇರಿ ಸುಧೀಂದ್ರ ಅವರ ದೇಹವನ್ನು ಬೆಂಗಳೂರು ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಹಸ್ತಾಂತರ ಮಾಡಲಾಗಿದೆ. ಸುಪ್ರಸಿದ್ಧ ವಿಜ್ಞಾನ ಬರಹಗಾರ, ಡಿ.ಆರ್.ಡಿ.ಒ ಮಾಜಿ ವಿಜ್ಞಾನಿ, ಹೆಚ್.ಎ.ಎಲ್ ಸಂಸ್ಥೆಯ ಹಿರಿಯ ನಿವೃತ್ತ ಇಂಜಿನಿಯರ್ ಸುಧೀಂದ್ರ ಹಾಲ್ದೊಡ್ಡೇರಿ ನಿಧನರಾಗಿದ್ದಾರೆ. ತೀವ್ರ ಹೃದಯಾಘಾತಕ್ಕೆ ಈಡಾಗಿದ್ದ ಅವರು ವಾರದ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಎರಡು ದಿನಗಳ ಹಿಂದೆ ಅವರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದ ವೈದ್ಯರು ಅವರ ಮೆದುಳು ನಿಷ್ಕ್ರಿಯ (Brain Dead) ಹಂತಕ್ಕೆ ತಲುಪಿದೆ. ಪರಿಸ್ಥಿತಿ ಕಷ್ಟವಿದೆ ಎಂದು ಹೇಳಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೇ ಸುಧೀಂದ್ರ ಕೊನೆಯುಸಿರೆಳೆದಿದ್ದಾರೆ.
ಖಾಸಗಿ ಆಸ್ಪತ್ರೆಯಲ್ಲಿ ಐಸಿಯು ಚಿಕಿತ್ಸೆಯಲ್ಲಿದ್ದ ಹಾಲ್ದೊಡ್ಡೇರಿ ಸುಧೀಂದ್ರ ಅವರನ್ನು ತಜ್ಞ ವೈದ್ಯರ ತಂಡ ನೋಡಿಕೊಳ್ಳುತ್ತಿತ್ತು. ಸುಧೀಂದ್ರ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರಾದರೂ ಅವರಿಗೆ ಪ್ರಜ್ಞೆ ಇಲ್ಲವಾಗಿತ್ತು. ಹಾಲ್ದೊಡ್ಡೇರಿ ಸುಧೀಂದ್ರ ಅವರಿಗೆ ಕೆಲ ದಿನಗಳ ಹಿಂದೆ ಯಾವ ಪ್ರಮಾಣದ ಹೃದಯಾಘಾತವಾಗಿತ್ತೆಂದರೆ ಅವರ ಮೆದುಳಿಗೆ ಆಕ್ಸಿಜನ್ ಸರಬರಾಜು ಆಗುವುದು ನಿಂತು, ಅವರ ಮೆದುಳು ಬಹುತೇಕ ನಿಷ್ಕ್ರಿಯಗೊಂಡಿದೆ (Hypoxic ischemic encephalopathy -HIE) ಎಂದು ಆಸ್ಪತ್ರೆಯ ಮೂಲಗಳು ತಿಳಿಸಿದ್ದವು.
ಖ್ಯಾತ ವಿಜ್ಞಾನ ಬರಹಗಾರ ಹಾಲ್ದೊಡ್ಡೇರಿ ಸುಧೀಂದ್ರ (59) ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಕನ್ನಡದಲ್ಲಿ ವಿಜ್ಞಾನ ವಿಷಯಗಳನ್ನು ಮನೋಜ್ಞವಾಗಿ ಬರೆಯುತ್ತಿದ್ದ ಕೆಲವೇ ಬರಹಗಾರರಲ್ಲಿ ಒಬ್ಬರಾಗಿದ್ದರು. ಭಗವಂತನು ಮೃತರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಅವರ ಕುಟುಂಬದವರಿಗೆ ಅಗಲುವಿಕೆಯ ನೋವು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.