ಮಂಡ್ಯ: ಸಾಲಬಾಧೆಯಿಂದಾಗಿ ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೆ.ಆರ್.ಪೇಟೆ ತಾಲ್ಲೂಕಿನ ಸೋಮನಹಳ್ಳಿಪುರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ರೈತ ರಮೇಶ (50)ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಈತ ಜಮೀನಿನಲ್ಲಿ ಕೃಷಿ ಮಾಡುವ ಸಲುವಾಗಿ ಸಹಕಾರ ಸಂಘದಲ್ಲಿ ಒಂದು ಲಕ್ಷ ಹಾಗೂ ಜನರ ಬಳಿ ಕೈಸಾಲವಾಗಿ ಮೂರು ಲಕ್ಷ ರೂ ಮಾಡಿದ್ದರು. ಆದರೆ ತಾವು ಸಾಲ ಮಾಡಿ ಬೆಳೆದ ಬೆಳೆ ಕೈಕೊಟ್ಟಿದ್ದರಿಂದ ಚಿಂತೆಗೀಡಾಗಿದ್ದರು. ಇದಲ್ಲದೆ ಸಾಲ ನೀಡಿದವರು ಹಿಂತಿರುಗಿಸುವಂತೆ ಒತ್ತಡ ಹೇರುತ್ತಿದ್ದರಿಂದ ಮನ ನೊಂದಿದ್ದ ರೈತ ರಮೇಶ್ ಶನಿವಾರ ಮಧ್ಯಾಹ್ನ ಮೂರು ಗಂಟೆ ಸಮಯದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಈ ವಿಷಯ ಮನೆಯವರಿಗೆ ತಿಳಿದು ಅವರನ್ನು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಲಾಯಿತಾದರೂ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. ಈ ಸಂಬಂಧ ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.