ಚಾಮರಾಜನಗರ: ಕೈ ಕೊಟ್ಟ ಮಳೆ, ಬೆಳೆ, ಕೊಳವೆ ಬಾವಿಯಲ್ಲಿ ಬಾರದ ನೀರು. ಇದೆಲ್ಲದರಿಂದ ಬೇಸತ್ತ ರೈತನೊಬ್ಬ ನೇಣಿಗೆ ಶರಣಾಗಿದ್ದು, ಆತನ ಸಾವಿನಿಂದ ಕಂಗಲಾದ ಆತನ ಇಡೀ ಕುಟಂಬವೇ ಸೀಮೆಎಣ್ಣೆ ಸುರಿದು ಕೊಂಡು ಸಜೀವ ದಹನ ಮಾಡಿಕೊಂಡ ಘಟನೆ ತಾಲೂಕಿನ ಹೊನ್ನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ರೈತ ಶಿವನಪ್ಪ (45) ಸಾಲಬಾಧೆಗೆ ಹೆದರಿ ತನ್ನ ಜಮೀನಿನಲ್ಲಿ ನೇಣಿಗೆ ಶರಣಾದರೆ, ಆತನ ಮೃತ ದೇಹವನ್ನು ಕಂಡು ಕಂಗಲಾದ ಆತನ ಪತ್ನಿ ಕನ್ಯಾ(40) ಮನೆಗೆ ಬಂದು ತನ್ನ ಮಕ್ಕಳಾದ ಪ್ರಿಯಾ(6) ಮತ್ತು ಪ್ರೀತಿ(4) ಎಂಬಿಬ್ಬರಿಗೆ ಸೀಮೆಎಣ್ಣೆ ಸುರಿದು ಬಳಿಕ ತಾನು ಸುರಿದುಕೊಂಡು ಸಜೀವವಾಗಿ ದಹಿಸಿಕೊಂಡರು ಎಂದು ಹೇಳಲಾಗಿದೆ.
ಮೃತ ರೈತ ಶಿವನಪ್ಪ ಸುಮಾರು ಮೂರು ಲಕ್ಷ ರೂಪಾಯಿಗಳನ್ನು ಸಾಲ ಮಾಡಿದ್ದು ಸಾಲಗಾರರು ಮನೆಗೆ ಬಂದು ಸಾಲ ಮರು ಪಾವತಿ ಮಾಡುವಂತೆ ಒತ್ತಾಯಿಸುತ್ತಿದ್ದರು. ಇದರಿಂದ ಮನನೊಂದು ಸಾವಿಗೆ ಶರಣಾಗಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಪತಿ ಸಾಲದಬಾಧೆಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ತನ್ನನ್ನು ಮತ್ತು ತನ್ನ ಮಕ್ಕಳಿಬ್ಬರನ್ನು ಅನಾಥರನ್ನಾಗಿ ಮಾಡಿದ್ದಾರೆ ಸಾಲ ಹೇಗೆ ತೀರಿಸಲು ಎಂದು ಹೆದರಿ ಕನ್ಯಾ ತನ್ನ ಮಕ್ಕಳೊಂದಿಗೆ ತಾನು ಕೂಡ ಸಜೀವ ದಹನ ಮಾಡಿಕೊಂಡಿದ್ದಾರೆ.
ಒಟ್ಟಾರೆ ಸಾಲ ಇಡೀ ರೈತ ಕುಟುಂಬವನ್ನೇ ಬಲಿತೆಗೆದುಕೊಂಡಿದ್ದು ಗ್ರಾಮದಲ್ಲಿ ಶೋಕ ಆವರಿಸಿದೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.