ಚಿಕ್ಕಮಗಳೂರು: ಸಾಮಾಜಿಕ ಹೊಣೆಗಾರಿಕೆಯನ್ನು ಎಂಜಿನಿಯರ್ಗಳು ನಿರ್ವಹಿಸಬೇಕು. ಸರ್ಕಾರಿ ನಿರ್ಮಾಣ ಕಾರ್ಯದಲ್ಲಿ ಸೇವಾ ಮನೋಭಾವದಿಂದ ಸಹಕಾರ ನೀಡಬೇಕೆಂದು ಚಿಕ್ಕಮಗಳೂರು ಎಸ್ಪಿ ಎ ಅಣ್ಣಾಮಲೈ ಕರೆ ನೀಡಿದರು.
ಜಿಲ್ಲಾ ಸಿವಿಲ್ ಎಂಜಿನಿಯರ್ ಅಸೋಸಿಯೇಷನ್ ಹೊರತಂದಿರುವ ‘ಎಂಜಿನಿಯರ್ಸ್ ಡೈರಿ-2017’ ಅನ್ನು ಎಂಎಲ್ ವಿ ರೋಟರಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಬಿಡುಗಡೆಗೊಳಿಸಿ ಮಾತನಾಡಿದರು. ಅತ್ಯಾಧುನಿಕ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಕೆ ಮಾಡಬೇಕು. ಭಾರತದಲ್ಲಿ ಎಂಜಿನಿಯರಿಂಗ್ ಪದವಿ ಪಡೆಯುವುದು ಸುಲಭ. ಜರ್ಮನಿ ಮತ್ತಿತರ ದೇಶಗಳಲ್ಲಿ ಅಧ್ಯಯನದ ನಂತರ 3-4ವರ್ಷ ಪ್ರಾಯೋಗಿಕವಾಗಿ ವೃತ್ತಿನಿರ್ವಹಿಸಿದ ನಂತರ ಪದವಿ ನೀಡಲಾಗುತ್ತದೆ ಎಂದು ಹೇಳಿದರು.
ಆದರೆ ನಮ್ಮಲ್ಲಿ ಹಾಗಿಲ್ಲ. ಇಲ್ಲಿ ಬಹಳಷ್ಟು ಕಾಲೇಜುಗಳಿವೆ. ತಮಿಳುನಾಡು ರಾಜ್ಯದಲ್ಲಿ 650 ಎಂಜಿನಿಯರಿಂಗ್ ಕಾಲೇಜುಗಳು 3.75 ಲಕ್ಷ ಎಂಜಿನಿಯರ್ಗಳನ್ನು ತಯಾರಿಸುತ್ತಿದ್ದರೆ, ಆಂಧ್ರ ಮತ್ತು ಕರ್ನಾಟಕರಾಜ್ಯಗಳು ಇದರ ಜೊತೆಗೆ 1.7ಮಿಲಿಯನ್ ಎಂಜಿನಿಯರ್ಗಳನ್ನು ಸಿದ್ಧಪಡಿಸುತ್ತಿವೆ. ಮಹಾನಗರಗಳು ಇಂದು ಅತ್ಯಧಿಕ ಉಷ್ಣತಾವಲಯಗಳಾಗಿ ಮಾರ್ಪಡುತ್ತಿವೆ. ಹಳೆಯ ತಾಂತ್ರಿಕತೆಯೆ ಬಳಕೆಯಲ್ಲಿದ್ದು, ಬಹುತೇಕ ಎಲ್ಲ ನಿರ್ಮಾಣಗಳು ಸಿಮೆಂಟ್ ಮತ್ತು ಉಕ್ಕನ್ನೆ ಅವಲಂಬಿಸಿರುವುದು ಕಾಣುತ್ತಿದೆ ಎಂದು ನುಡಿದರು. ಇಂದು ಸಾರ್ವಜನಿಕ ಕಟ್ಟಡ, ರಸ್ತೆ, ಸೇತುವೆ, ಅಣೆಕಟ್ಟೆ, ಬಂದರು, ವಿಮಾನನಿಲ್ದಾಣ ಸೇರಿದಂತೆ ವಿಫುಲವಾದ ನಿರ್ಮಾಣಕಾರ್ಯಗಳು ನಡೆಯುತ್ತಿವೆ. ಬಹುತೇಕ ಕಡೆಗಳಲ್ಲಿ ಕಳಪೆ ಕಾಮಗಾರಿ ನಡೆದು ಹಣ ಅಪವ್ಯಯಗೊಳ್ಳುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಪಟ್ಟಣ ಪ್ರದೇಶದಲ್ಲಿ ನಾಲ್ಕೈದು ಜನಮಾತ್ರ ಗುತ್ತಿಗೆಪಡೆದು ಹಣಮಾಡುತ್ತಿದ್ದಾರೆ. ದೇಶದಲ್ಲಿ ವಿಫುಲವಾಗಿ ಎಂಜಿನಿಯರ್ಗಳಿದ್ದಾರೆ. ಆದರೆ ಕಳಪೆ ಕಾಮಗಾರಿ ನಿಂತಿಲ್ಲ. ಡಾಕ್ಟರ್ಗಳಿದ್ದಾರೆ ಮಲೇರಿಯಾದಂತಹ ಕಾಯಿಲೆ ನಿಂತಿಲ್ಲ. ಸಿರಿವಂತಿಕೆ ಇದೆ ಆದರೆ ಹಸಿವು-ಬಡತನ ರಾಚುತ್ತಿದೆ. ಇಂತಹ ವೈರುಧ್ಯಗಳ ನಡುವೆ ಕಾರ್ಪೋರೇಟ್ ಸೋಷಿಯಲ್ ರೆಸ್ಪಾನ್ಸಿಬಲಿಟಿಯನ್ನು ಎಂಜಿನಿಯರ್ಗಳು ನಿರ್ವಹಿಸಬೇಕೆಂದರು.