ಕೊಪ್ಪಳ: ಭೂಗತ ಪತಾಕಿ ರವಿ ಪೂಜಾರಿ ಎಂದು ಹೆಸರು ಹೇಳಿ ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ ಗೆ ಬೆದರಿಕೆಯೊಡ್ಡಿರುವ ಬಗ್ಗೆ ದೂರು ದಾಖಲಾಗಿದೆ.
ಶಾಸಕರ ಆಪ್ತ ಸಹಾಯಕ ಶಿವಾನಂದ್ ಅವರು ಈ ಕುರಿತು ದೂರು ನೀಡಿದ್ದಾರೆ. ಆತ ಕರೆ ಮಾಡಿದಾಗ ಶಾಸಕರ ಜತೆ ತೀವ್ರ ಕೋಪದಲ್ಲಿ ಮಾತನಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾನೆ.
ಅದಲ್ಲದೆ ‘ಹಿಂದೂಗಳ ವಿರುದ್ಧ ಮಾಧ್ಯಮಗಳ ಜತೆ ಮಾತನಾಡಬಾರದು. ಒಂದು ವೇಳೆ ಮಾತನಾಡಿದರೆ ನನ್ನ ಜನರು ಗುಂಡು ಹೊಡೆದು ಸಾಯಿಸುತ್ತಾರೆ’ ಎಂದು ಎಚ್ಚರಿಸಿದ್ದಾನೆ. ಇದೀಗ ಮಾತನಾಡಿರುವ ಆಡಿಯೋ ಎಲ್ಲೆಡೆ ವೈರಲ್ ಆಗಿತ್ತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅನೂಪ್ ಎ. ಶೆಟ್ಟಿ ಅವರು ಪ್ರಕರಣ ದಾಖಲಾಗಿಸಿದ್ದಾರೆ. ‘ಘಟನೆಯ ಬಗ್ಗೆ ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತಿದೆ. ಆಡಿಯೋ ಇರುವುದರಿಂದ ಅದನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿ ಅದು ರವಿಪೂಜಾರಿಯದ್ದೇ ಎಂದು ಖಚಿತಪಡಿಸಬೇಕಿದೆ. ವಿದೇಶದಿಂದ ಬರುವ ಕರೆಗಳ ಬಗ್ಗೆಯೂ ಪರಿಶೀಲನೆ ನಡೆಯಬೇಕು’ ಎಂದು ಅವರು ತಿಳಿಸಿದರು.