ವಿರಾಜಪೇಟೆ: ಸರಕಾರಿ ಪ್ರಥಮ ಕಾಲೇಜು ಅರಂಭವಾಗಿ ತಿಂಗಳು ಕಳೆಯುತ ಬಂದರೂ ಉಪನ್ಯಾಸಕರು ಇಲ್ಲದೆ ಸಮಗ್ರವಾಗಿ ಪಾಠ ಪ್ರವಚನ ನಡೆದಿಲ್ಲ. ಎಂಬ ಕಾರಣದಿಂದ ಬೇಸತ್ತ ಸುಮಾರು 700 ಕ್ಕೂ ಹೆಚ್ಚು ಮಕ್ಕಳಿಗೆ ತೊಂದರೆ ಆಗಿದೆ ಎಂದು ಇಂದು ತರಗತಿ ಬಹಿಷ್ಕಾರ ಮಾಡಿ ಉಪನ್ಯಾಸಕರನ್ನು ನೇಮಿಸಲು ಆಗ್ರಹಿಸಿ ಮೀನುಪೇಟೆ ರಸ್ತೆಯ ಕಾಲೇಜು ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಇದ್ದ ಖಾಯಂ ಉಪನ್ಯಾಸಕರನ್ನು ವರ್ಗ ಮಾಡಿ ಪುಣ್ಯ ಕಟ್ಟಿಕೊಂಡ ಸರಕಾರ, ಅಲ್ಲಿಗೆ ಬೇರೆ ಉಪನ್ಯಾಸಕರನ್ನು ಅಥವ ಅತಿಥಿ ಉಪನ್ಯಾಸಕರನ್ನು ನೇಮಿಸುವ ಗೋಜಿಗೆ ಹೋಗಿಲ್ಲ. ಅದ ಕಾರಣ ಇಂದು ಪ್ರಾಂಶುಪಾಲರು ಸೇರಿ ಮೂರು ನಾಲ್ಕು ಜನ ಉಪನ್ಯಾಸಕರು ಇದ್ದಾರೆ. ಕನಿಷ್ಠ 10 ಜನ ಉಪನ್ಯಾಸಕರು ಕಾಲೇಜಿಗೆ ಬೇಕಾಗಿದೆ. ಜೊತೆಗೆ ವಿಪರ್ಯಾಸ ಎಂದರೆ ಈ ಕಾಲೇಜು ಪ.ಪಂ ನ ಪ್ರಾಥಮಿಕ ಶಾಲಾ ಕಟ್ಟಡದಲ್ಲಿ ಸ್ವಲ್ಪ ಭಾಗದ ತರಗತಿಯನ್ನು ಹಾಗೂ ಒಂದು ಕಿ ಮೀ ದೂರದಲ್ಲಿನ ಚಿಕ್ಕಪೇಟೆ ಬಳಿ ಮತ್ತೊಂದಿಷ್ಟು ತರಗತಿ ಇದೆ.
ಈ ಎರಡು ಕಡೆಗೆ ಮೂರು, ನಾಲ್ಕು ಜನ ಉಪನ್ಯಾಸಕರು ಕಸರತ್ತು ನಡೆಸಬೇಕು. ಇಂತಹ ಸ್ಥಿತಿಯ ಕಾರಣ ಉಪನ್ಯಾಸಕರು ಶಕ್ತಿ ಮೀರಿ ಪಾಠ ಪ್ರವಚನ ಮಾಡಿದರು ನಿಗದಿಯಂತೆ ಪಾಠ ಪ್ರವಚನ ಕಷ್ಟವಾಗುತ್ತಿದೆ ಎಂದು ವಿದ್ಯಾರ್ಥಿಗಳು ಹೇಳುತ್ತಾರೆ. ಸರಕಾರ ಹೊಸದಾಗಿ ಅತಿಥಿ ಉಪನ್ಯಾಸಕರನ್ನು ನೇಮಿಸಲಾಗುತ್ತದೆ ಎನ್ನುತ್ತಿದೆ, ಅತ್ತ ಕಳೆದ ಸಾಲಿನಲ್ಲಿ ಇದ್ದ ಅತಿಥಿ ಉಪನ್ಯಾಸಕರಿಗೆ ಪಾಠ ಮಾಡಲು ಇನ್ನು ಸೂಚನೆ ನೀಡಿಲ್ಲ. ಈ ಗೊಂದಲದಿಂದ ವಿದ್ಯಾರ್ಥಿಗಳು ಒಂದು ತಿಂಗಳು ಪಾಠ ಪ್ರವಚನ ಇಲ್ಲದೆ ಕಾಲೇಜಿಗೆ ಬಂದು ಹೋಗುತ್ತಿದ್ದಾರೆ ಅಷ್ಟೆ.
ಈ ಕಾಲೇಜಿನಲ್ಲಿ ಬಹುತೇಕ ಬಡ ಮಕ್ಕಳು ಓದುತ್ತಿದ್ದು ಇರುವುದರಲ್ಲಿ ಕಾಲೇಜು ಸಹ ಉತ್ತಮವಾಗಿ ಹತ್ತಾರು ವರ್ಷದಿಂದ ನಡೆದು ಬರುತ್ತಿದೆ. ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದ್ದು, ಬಾರಿ ಶುಲ್ಕದ ಹೊರೆ ಬರಿಸಲಾಗದ ಕೂಲಿ ಕಾರ್ಮಿಕರ ಮಕ್ಕಳ ಆಶಾ ಕಿರಣವಾಗಿದೆ ಈ ಕಾಲೇಜು. ಈ ಕಾಲೇಜಿಗೆ ವಿರಾಜಪೇಟೆ ತಾಲೂಕಿನಾದ್ಯಂತದಿಂದ ವಿದ್ಯಾರ್ಥಿಗಳು ಜ್ಞಾನರ್ಜನೆಗೆ ಬರುತ್ತಿದ್ದಾರೆ. ಆದರೆ ಉಪನ್ಯಾಸಕರ ಕೊರತೆ ಈ ಸಾಲಿನ ಆರಂಭದಲ್ಲಿ ವಿದ್ಯಾರ್ಥಿಗಳಿಗೆ ನಿರಾಶೆ ತಂದಿದೆ.
ಆದರಿಂದ ಅನಿವಾರ್ಯವಾಗಿ ಪ್ರತಿಭಟನೆ ನಡೆಸಿದ್ದು, ಪ್ರಾಂಶುಪಾಲರು ಇನ್ನು ಎರಡು ಮೂರು ದಿನದಲ್ಲಿ ಅತಿಥಿ ಉಪನ್ಯಾಸಕರು ಬರಲಿದ್ದಾರೆ ಎಂದಿದ್ದಾರೆ. ನಾವು ಪ್ರತಿಭಟನೆ ಮುಂದುವರಿಸಲಿದ್ದು ನಾಳೆ (ಆ-2) ರಂದು ತಾಲೂಕು ತಹಶಿಲ್ದಾರ್ ರಿಗೆ ಮನವಿ ಸಲ್ಲಿಸುವುದಾಗಿ ವಿದ್ಯಾರ್ಥಿಗಳು ಹೇಳುತ್ತಾರೆ.