ಕಾಸರಗೋಡು: ಯುವಕನೋರ್ವನ ಕೊಲೆಯತ್ನ ಸೇರಿದಂತೆ ಹಲವು ಪ್ರಕರಣಗಳಲ್ಲಿ ಶಾಮೀಲಾಗಿ ತಲೆಮರೆಸಿಕೊಂಡಿದ್ದ ಆರೋಪಿಯೋರ್ವನನ್ನು ಬದಿಯಡ್ಕ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಉಳಿಯತ್ತಡ್ಕದ ಅಬ್ದುಲ್ ಸಮಾದಾನಿ(34) ಎಂದು ಗುರುತಿಸಲಾಗಿದೆ. ಗಲ್ಫ್ ಗೆ ತೆರಳಿದ್ದ ಈತ ಊರಿಗೆ ಮರಳುತ್ತಿರುವ ಬಗ್ಗೆ ಲಭಿಸಿದ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಕೋಝಿಕ್ಕೋಡು ವಿಮಾನ ನಿಲ್ದಾಣದಿಂದ ಈತನನ್ನು ಬಂಧಿಸಿದ್ದಾರೆ.
2018 ಅಕ್ಟೋಬರ್ 8ರಂದು ನೆಲ್ಲಿಕಟ್ಟೆಯ ನೌಶಾದ್ ಎಂಬಾತನನ್ನು ಕಾರಿನಲ್ಲಿ ಅಪಹರಿಸಿ ಕೊಲೆಗೆ ಯತ್ನಿಸಿರುವುದಾಗಿ ಈತನ ವಿರುದ್ಧ ಕೇಸು ದಾಖಲಿಸಲಾಗಿದೆ.
ಐದು ಲಕ್ಷ ರೂಪಾಯಿ ಮೌಲ್ಯದ ಗಾಂಜಾವನ್ನು ಆಂಧ್ರ ಪ್ರದೇಶದಿಂದ ಸಾಗಿಸುತ್ತಿದ್ದಾಗ ಅಲ್ಲಿನ ಪೊಲೀಸರು ತಂಡವನ್ನು ಬಂಧಿಸಿದ್ದರು. ಗಾಂಜಾ ಸಾಗಾಟ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿರುವುದು ನೌಶಾದ್ ಆಗಿದ್ದಾರೆಂದು ಆರೋಪಿಸಿ ಅವರನ್ನು ಕಾರಿನಲ್ಲಿ ಅಪಹರಿಸಿ ಮಧೂರು ಬಳಿಯ ಪರಕ್ಕಿಲದಲ್ಲಿ ಜನವಾಸವಿಲ್ಲದ ಮನೆಯಲ್ಲಿ ಕೂಡಿ ಹಾಕಿ ಆಕ್ರಮಿಸಲಾಗಿತ್ತು. ಈ ಪ್ರಕರಣದಲ್ಲಿ ನೆಲ್ಲಿಕಟ್ಟೆ ಸಫಾನ್ ಎಂಬಾತನ್ನು ಈ ಹಿಂದೆ ಬಂಧಿಸಲಾಗಿತ್ತು. ಎರಡನೇ ಆರೋಪಿ ಬದ್ರು ಎಂಬಾತ ತಲೆಮರೆಸಿಕೊಂಡಿದ್ದಾನೆ.
ಮೂರನೇ ಆರೋಪಿ ಅಬ್ದುಲ್ ಸಮದಾನಿ ವಿದೇಶಕ್ಕೆ ಪರಾರಿಯಾದ ಬಗ್ಗೆ ಈ ಹಿಂದೆ ಮಾಹಿತಿ ಲಭಿಸಿತ್ತು. ಇದರ ಆಧಾರದಲ್ಲಿ ಈತನ ವಿರುದ್ಧ ಲುಕ್ಔಟ್ ನೋಟಿಸ್ ಹೊರಡಿಸಲಾಗಿತ್ತು. ಆರೋಪಿ ಸೋಮವಾರ ಗಲ್ಫ್ ನಿಂದ ಮರಳಿ ಬರುತ್ತಿದ್ದಾಗ ಕರಿಪ್ಪೂರ್ ವಿಮಾನ ನಿಲ್ದಾಣದಲ್ಲಿ ಆತನನ್ನು ತಡೆದು ನಿಲ್ಲಿಸಿ ಬದಿಯಡ್ಕ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಇದರಂತೆ ಪೊಲೀಸರು ಅಲ್ಲಿಗೆ ತೆರಳಿ ಆರೋಪಿಯನ್ನು ಬಂಧಿಸಿದ್ದಾರೆ.
ನೌಶಾದ್ ನನ್ನು ಅಪಹರಿಸಿ ಹಲ್ಲೆಗೈದ ಪ್ರಕರಣದಲ್ಲಿ ಇನ್ನೋರ್ವ ಆರೋಪಿಯಿದ್ದು, ಅಬ್ದುಲ್ ಸಮದಾನಿಯನ್ನು ತನಿಖೆಗೊಳಪಡಿಸಿದರೆ ಆರೋಪಿ ಕುರಿತು ಮಾಹಿತಿ ಲಭಿಸಬಹುದೆಂದು ಪೊಲೀಸರು ತಿಳಿಸಿದ್ದಾರೆ. ಇದೀಗ ಸೆರೆಗೀಡಾದ ಆರೋಪಿ ವಿರುದ್ಧ ಕಾಸರಗೋಡು, ಕುಂಬಳೆ, ವಿದ್ಯಾನಗರ ಠಾಣೆಗಳಲ್ಲಿ ಕೇಸುಗಳಿವೆ. ಅಲ್ಲದೆ ವಿದ್ಯಾನಗರದಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಈತ ವಾರಂಟ್ ಆರೋಪಿಯೆಂದು ಪೊಲೀಸರು ತಿಳಿಸಿದ್ದಾರೆ.